ಸಿಂದಗಿ: ಸುಮಾರು 41 ವಿದ್ಯಾರ್ಥಿಗಳ ಟಿಸಿ ವರ್ಗಾವಣೆ ಹಾಗೂ ಶಿಕ್ಷಕರೊಬ್ಬರ ಅಮಾನತು ಖಂಡಿಸಿ ತಾಲೂಕಿನ ಹಿಕ್ಕನಗುತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿದ್ರು.
ಪೋಷಕರೊಂದಿಗೆ ಬಂದ ಸುಮಾರು 100 ವಿದ್ಯಾರ್ಥಿಗಳು ಬಿಇಒ ಕಚೇರಿ ಎದುರು ಪ್ರತಿಭಟನೆ ನಡೆಸಿ, ಈ ಹಿಂದೆ ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ಪಿ.ಜಿ ಹಿರೇಮಠ, ಸಹ ಶಿಕ್ಷಕ ಪಿ.ಆರ್ ಓಲೆಕಾರ, ಡಿಡಿಪಿಐ ಹಾಗೂ ಬಿಇಒ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಸಹ ಆಗಮಿಸಿದ್ರು. ಯಾವ ಕಾರಣಕ್ಕೆ ಪ್ರತಿಭಟನೆ ನಡೆಸಲಾಗ್ತಿದೆ ಅನ್ನೋದರ ಮಾಹಿತಿ ಪಡೆಯಲಾಯ್ತು. ಬಿಇಒ ಅನುಪಸ್ಥಿತಿಯಲ್ಲಿ ದೈಹಿಕ ಶಿಕ್ಷಣಾಧಿಕಾರಿ ಎ.ಎಂ ಬಿರಾದರ ಅವರಿಗೆ ಮನವಿ ಪತ್ರ ಸಲ್ಲಿಸಲಾಯ್ತು.
ಘಟನೆ ಹಿನ್ನೆಲೆ ಏನು?
ಹಿಕ್ಕನಗುತ್ತಿ ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ 1 ರಿಂದ 8ನೇ ತರಗತಿಯಿದೆ. ಇಲ್ಲಿ ಸುಮಾರು 340ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದ್ತಿದ್ದಾರೆ. ಇದರಲ್ಲಿ 47 ವಿದ್ಯಾರ್ಥಿಗಳು 8ನೇ ತರಗತಿಯಲ್ಲಿ ಅಭ್ಯಾಸ ಮಾಡ್ತಿದ್ದಾರೆ. ಹೀಗಿರುವಾಗ 8ನೇ ತರಗತಿಯ 41 ವಿದ್ಯಾರ್ಥಿಗಳ ಟಿಸಿ ಅನ್ನು ಖಾಸಗಿ ಶಾಲೆಯಾದ ಸುಭೋಧಿ ಪ್ರೌಢಶಾಲೆಗೆ ಹಿಂದಿನ ಹೆಡ್ ಮಾಸ್ಟರ್ ಪ್ರಭಯ್ಯ ಗುರುಮೂರ್ತಿ ಹಿರೇಮಠ ಹಾಗೂ ಸಹ ಶಿಕ್ಷಕ ಪರಮಾನಂದ ರುದ್ರಪ್ಪ ಓಲೆಕಾರ ಅವರು ವರ್ಗಾಯಿಸಿದ್ದಾರೆ.
ಇದು ತಿಳಿದ ಗ್ರಾಮಸ್ಥರು ಪ್ರತಿಭಟನೆ ಮಾಡಿದಾಗ ಹೆಡ್ ಮಾಸ್ಟರ್ ಹಾಗೂ ಸಹ ಶಿಕ್ಷಕರನ್ನ ಬೇರೆ ಕಡೆ ವರ್ಗಾಯಿಸಲಾಗಿದೆ. ಅಲ್ದೇ, 20 ವಿದ್ಯಾರ್ಥಿಗಳನ್ನ ವಾಪಸ್ ಕರೆದುಕೊಂಡು ಬರಲಾಗಿದೆ. ಇನ್ನುಳಿದ 27 ವಿದ್ಯಾರ್ಥಿಗಳು ಅಲ್ಲಿಯೇ ಉಳಿದಿದ್ದಾರೆ. ಹೆಡ್ ಮಾಸ್ಟರ್ ಜಾಗಕ್ಕೆ ಎಂ.ಎಂ ಕಾರಕಲ್ ಅವರನ್ನ ಸದ್ಯಕ್ಕೆ ನೇಮಿಸಲಾಗಿದೆ. ಆದ್ರೆ, ಇವರ ವಿರುದ್ಧ ದೌರ್ಜನ್ಯದ ಸುಳ್ಳು ಮಾಹಿತಿ ನೀಡಲಾಗಿದೆ. ಇದನ್ನ ಪರಿಶೀಲನೆ ಮಾಡದೆ ಅಮಾನತು ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಎಲ್ಲ ಕಾರಣಗಳಿಗೆ ಬಿಇಒ, ಡಿಡಿಪಿಐ ಹಾಗೂ ಆಯುಕ್ತರಿಗೂ ಸಹ ಪತ್ರ ಬರೆಯಲಾಗಿದೆ. ಯಾರಿಗೂ ಹೇಳದೆ ಕೇಳದ 41 ವಿದ್ಯಾರ್ಥಿಗಳ ಟಿಸಿ ವರ್ಗಾವಣೆ ಮಾಡಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದರ ಜೊತೆಗೆ ವಿನಾಃಕಾರಣ ಅಮಾನತು ಮಾಡಿದ ಶಿಕ್ಷಕ ಎಂ.ಎಂ ಕಾರಕಲ್ ಅವರನ್ನ ಮರಳಿ ನೇಮಿಸಬೇಕೆಂದು ಆಗ್ರಹಿಸಿದ್ದಾರೆ. ಈ ಎಲ್ಲ ಘಟನೆಗಳ ಹಿಂದೆ ಎಸ್ ಡಿಎಂಸಿ ಸದಸ್ಯರ ನಡುವಿನ ಒಳಜಗಳ ಕಾರಣ ಅನ್ನೋ ಮಾತುಗಳು ಸಹ ಕೇಳಿ ಬಂದಿವೆ.