ಸಿಂದಗಿ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸಂಭ್ರಮ ಸಡಗರದಿಂದ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲಾಯ್ತು. ತಾಲೂಕು ಆಡಳಿತ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಬಿ.ಎಸ್ ಕಡಕಭಾವಿ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಎಲ್ಲರಿಗೂ ಶುಭ ಕೋರಿದ್ರು.
ಪಟ್ಟಣದ ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ರು. ಈ ವೇಳೆ ಎಸ್ಎಸ್ಎಲ್ ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳಿಗೆ ಲಾಪ್ ಟಾಪ್ ವಿತರಣೆ ಮಾಡಲಾಯ್ತು. ಅಲ್ದೇ, ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ನೀಡಲಾಯ್ತು.
ಇನ್ನು ವಿವಿಧ ಶಾಲೆಯ ಮಕ್ಕಳು ಡ್ರಿಲ್ ಮಾಡುವ ಮೂಲಕ ಗಮನ ಸಳೆದ್ರು. ಇದೇ ವೇಳೆ ಸ್ವತಂತ್ರ ಹೋರಾಟಗಾರರ ವೇಷಭೂಷಣ ತೊಟ್ಟ ಮಕ್ಕಳು ಸಹ ಮಿಂಚಿದ್ರು.
ಈ ಸಂಭ್ರಮ ಸಡಗರವನ್ನ ಮತ್ತಷ್ಟು ಹೆಚ್ಚಿಸಿದ್ದು ಶಾಲಾ ಮಕ್ಕಳ ದೇಶಭಕ್ತಿ ಗೀತೆಯ ಸಾಂಸ್ಕೃತಿಕ ಕಾರ್ಯಕ್ರಮ. ಪ್ರೇರಣಾ ಸ್ಕೂಲ್, ಮಂದರಾ ಶಾಲೆ, ಜ್ಞಾನ ಭಾರತಿ ವಿದ್ಯಾಮಂದಿರ, ಹೆಚ್.ಜಿ ಬಾಲಕರ ಪ್ರೌಢಶಾಲೆ, ಪದ್ಮರಾಜ ಪ್ರೌಢಶಾಲೆ ಹಾಗೂ ಚೆನ್ನವೀರ ಪಟ್ಟಾಧ್ಯಕ್ಷರ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳು ದೇಶ ಪ್ರೇಮ ಮೆರೆಯುವ ಗೀತೆಗಳಿಗೆ ಸುಂದರವಾಗಿ ಹೆಜ್ಜೆ ಹಾಕಿದ್ರು.
ವಿವಿಧ ಶಾಲೆಯ ವಿದ್ಯಾರ್ಥಿಗಳ ಡ್ಯಾನ್ಸ್ ನೋಡಲು ಇಡೀ ಕ್ರೀಡಾಂಗಣದ ತುಂಬಾ ಜನ ತುಂಬಿಕೊಂಡಿದ್ರು. ಪ್ರತಿ ಶಾಲೆಯ ಮಕ್ಕಳು ಡ್ಯಾನ್ಸ್ ಮಾಡ್ತಿದ್ರೆ, ಅವರಿಗೆ ಮತ್ತಷ್ಟು ಜೋಶ್ ತುಂಬುವ ಕೆಲಸವನ್ನ ವೀಕ್ಷಕರು ಮಾಡ್ತಿದ್ರು.
ಇನ್ನು ಭೀಮಾ ಯೂನಿವರ್ಸಲ್ ಸೆಂಟರಲ್ ಸ್ಕೂಲ್ ವತಿಯಿಂದ ನಿರ್ಮಾಣ ಮಾಡಲಾಗಿದ್ದ ಸೇನಾ ಪಡೆಯ ವಾಹನ ನೋಡುಗರ ಗಮನ ಸೆಳೆಯಿತು. ಐದಾರು ವಿದ್ಯಾರ್ಥಿಗಳು ಸೇನಾ ಸಮವಸ್ತ್ರದಲ್ಲಿ ಕಾಣಿಸಿಕೊಂಡ್ರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಸಿಪಿಐ ಸತೀಶಕುಮಾರ ಕಾಂಬಳೆ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಭಾವತಿ ಶಿರಸಗಿ, ಉಪಾಧ್ಯಕ್ಷೆ ಲಲಿತಾ ದೊಡಮನಿ, ಎಪಿಎಂಸಿ ಅಧ್ಯಕ್ಷ ಹಳ್ಳೆಪ್ಪಗೌಡ ಚೌದ್ರಿ, ಉಪಾಧ್ಯಕ್ಷೆ ಮಹಾದೇವಿ ಅಮರಗೋಳ, ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ವೈಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್ ನಗನೂರ ಹಾಗೂ ಪುರಸಭೆ ಮುಖ್ಯಾಧಿಕಾರಿ ಸಯೀದ್ ಅಹ್ಮದ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ರು.