ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ಕನ್ನಡ ಚಿತ್ರರಂಗ ಎದುರಿಸುತ್ತಿರುವ ಹಲವು ಸಮಸ್ಯೆಗಳು ಹಾಗೂ ಬೇಡಿಕೆಗಳ ಈಡೇರಿಕೆ ಸಂಬಂಧ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು, ನಿರ್ದೇಶಕರು ಭೇಟಿಯಾಗಿದ್ದಾರೆ.
ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ರಾಜೇಂದ್ರ ಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್, ಪಿ.ಶೇಷಾದ್ರಿ, ಟಿ.ಎನ್ ಸೀತಾರಾಂ, ಬಿ.ಎಸ್ ಲಿಂಗದೇವರು, ನಂಜುಂಡೇಗೌಡ, ಬಿ.ರಾಮಮೂರ್ತಿ, ಕೃಷ್ಣೇಗೌಡ ಸೇರಿದಂತೆ ಹಲವರು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಜನತಾ ಚಿತ್ರಮಂದಿರ ನಿರ್ಮಿಸಲು ಇರುವ ಕಾನೂನು ತೊಡಕುಗಳನ್ನು ಶೀಘ್ರದಲ್ಲಿ ಪರಿಹರಿಸಿ ಕೊಡಲು ಮತ್ತೊಂದು ಸಭೆಯನ್ನು ಕೂಡ ನಿಗದಿಪಡಿಸಿದ್ದಾರೆ. ಕನ್ನಡ ಭಾಷೆ, ಸಂಪ್ರದಾಯ ಮತ್ತು ನಮ್ಮ ನೆಲದ ಕತೆಗಳಿವೆ ಪ್ರಾಮುಖ್ಯತೆ ಕೊಡುವ ಕನ್ನಡ ಚಿತ್ರಗಳಿಗೆ ಮತ್ತಷ್ಟು ಸವಲತ್ತು ಮತ್ತು ಸಹಕಾರ ನೀಡಲು ಸರ್ಕಾರ ಕ್ರಮಕೈಗೊಳ್ಳುತ್ತದೆ ಎಂಬ ಭರವಸೆ ನೀಡಿದರು. ಈಗಿರುವ ಸಹಾಯದನದ ಮಾನದಂಡಗಳನ್ನು ಮತ್ತು ಇನ್ನೂ ಅನೇಕ ಕಾನೂನುಗಳನ್ನು ಗಟ್ಟಿಯಾಗಿಸಿ ಅರ್ಹತೆ ಇರುವ ಚಿತ್ರಗಳಿಗೆ ಮಾತ್ರ ಸವಲತ್ತು ಸಿಗುವಂತೆ ಮಾಡಲು ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.
68ನೇ ರಾಷ್ಟ್ರ ಪ್ರಶಸ್ತಿಯನ್ನು ‘ನಾದದ ನವನೀತ’ ಸಾಕ್ಷ್ಯಚಿತ್ರಕ್ಕಾಗಿ ಪಡೆದ ಪದ್ಮಶ್ರೀ ಡಾ ಗಿರೀಶ್ ಕಾಸರವಳ್ಳಿಯವರನ್ನು ಇದೇ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಅಭಿನಂದಿಸಿದರು. ನಿರ್ದೇಶಕರ ಬೇಡಿಕೆಗಳಿಗೆ ಸಚಿವ ಜೆ.ಸಿ ಮಾಧುಸ್ವಾಮಿ, ಶಾಸಕ ರಾಜುಗೌಡ ಅವರು. ಈ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಮತ್ತು ಇಲಾಖೆಯ ಆಯುಕ್ತರಾದ ಹರ್ಷ ಅವರು ಉಪಸ್ಥಿತರಿದ್ದರು.