ಪ್ರಜಾಸ್ತ್ರ ಸುದ್ದಿ
ಮಂಡ್ಯ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಜೋರಾಗುತ್ತಿವೆ. ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಸಂಸದೆ ಸುಮಲತಾ ಅಂಬರೀಶ್, ನನ್ನ ಸ್ವಾರ್ಥಕ್ಕಾಗಿ ನಾನು ಮಂಡ್ಯ ಬಿಟ್ಟು ಹೋಗುವುದಿಲ್ಲ. ಬೇರೆ ಕ್ಷೇತ್ರದ ಬಗ್ಗೆ ಆಸಕ್ತಿ ಇಲ್ಲ ಎಂದಿದ್ದಾರೆ.
ಮೋದಿ ಅವರ ಕೆಲಸ ನೋಡಿ ನಾನು ಬೆಂಬಲ ನೀಡಿದ್ದೇನೆ. ನನ್ನ ಕೆಲಸದ ಟ್ರ್ಯಾಕ್ ರೆಕಾರ್ಡ್ ಸಹ ಅವರಿಗೆ ಗೊತ್ತು. ಇನ್ನೂ ಮಂಡ್ಯ ಜನರ ಕೆಲಸ ಮಾಡುವ ಹಂಬಲವಿದೆ. ಜೈಡಿಎಸ್ ಜೊತೆಗೆ ಮೈತ್ರಿಯಾದ ಮೇಲೆ ಯಾವುದೇ ಮಾತುಕತೆಯಾಗಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಫೋನ್ ಮಾಡಿ ಭೇಟಿಯಾಗುವುದಾಗಿ ಹೇಳಿದ್ದಾರೆ. ಸಂಸತ್ ಬಜೆಟ್ ಅಧಿವೇಶನ ಇರುವುದರಿಂದ ನಾನು ದೆಹಲಿಗೆ ಹೊರಟಿದ್ದೇನೆ ಎಂದರು.
ಬಿಜೆಪಿ-ಜೆಡಿಎಸ್ ಮೈತ್ರಿಯಾಗಿರುವುದರಿಂದ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆ ಇದೆ. ಕಳೆದ ಬಾರಿ ಕುಮಾರಸ್ವಾಮಿ ಮಗ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲೂ ನಿಖಿಲ್ ಸೋತಿದ್ದಾರೆ. ಹೀಗಾಗಿ ಮಗನನ್ನು ಈ ಬಾರಿ ಕಣಕ್ಕೆ ಇಳಿಸಿ ಗೆಲುವು ಸಾಧಿಸಬೇಕು ಎನ್ನುತ್ತಿರುವ ಕುಮಾರಸ್ವಾಮಿಗೆ ಮತ್ತೆ ಹಿನ್ನಡೆಯಾಗುತ್ತಾ? ಬಿಜೆಪಿ ಹೈಕಮಾಂಡ್ ಸಂಸದೆ ಸುಮಲತಾರ ಮನವೊಲಿಸಿ ಬೇರೆ ಕಡೆ ಟಿಕೆಟ್ ಕೊಡುತ್ತಾರಾ? ಈ ಬಾರಿಯೂ ಪಕ್ಷೇತರ ಅಭ್ಯರ್ಥಿಯಾಗಿಯೇ ಸ್ಪರ್ಧಿಸುತ್ತಾರಾ ಎನ್ನುವುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.