ಮಂಡ್ಯ: ಬೆಂಗಳೂರಿನಲ್ಲಿ ನೋಡಿದ್ರೆ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಇಲ್ಲಿ ವೈದ್ಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ನಡೆದಿದೆ. ನಾಗಮಂಗಲ ಬೆಳ್ಳೂರು ಹೋಬಳಿ ವಳಗೆರೆ ಪುರದಲ್ಲಿ ಯುವಕರ ವೈದ್ಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ.
ನಾಗಮಂಗಲ ತಾಲೂಕಿನಲ್ಲಿ ಕರೋನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ತಪಾಸಣೆ ನಡೆಸುತ್ತಿರುವ ಡಾ.ಮಮತಾರವರ ತಂಡ ಬೆಳ್ಳೂರು ಹೋಬಳಿ ವಳಗೆರೆಪುರಕೆ ಭೇಟಿ ನೀಡಿದೆ. ಆಗ ಯುವಕರ ಗುಂಪೊಂದು ಆಟವಾಡುತ್ತಿರುವುದನ್ನು ಕಂಡು ಕರೋನಾ ಕಾಯಿಲೆ ಹರಡುತ್ತಿದ್ದು ಯಾರು ಕೂಡ ಹೀಗೆ ಗುಂಪುಗುಂಪಾಗಿ ಸೇರಬಾರದು ಎಂದು ತಿಳಿ ಹೇಳಿದ್ದಾರೆ. ಆಗ ಯುವಕರು ಡಾ.ಮಮತಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಬಳಿಕ ಡಾ.ಮಮತಾರವರು ತಾಲೂಕು ಆರೋಗ್ಯಾಧಿಕಾರಿ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಘಟನೆ ನಡೆದ ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ.ಧನಂಜಯ ಹಾಗೂ ಡಿವೈಎಸ್ಪಿ ವಿಶ್ವನಾಥ್, ಸಿಪಿಐ ಕೆ ರಾಜೇಂದ್ರ, ಪಿಎಸ್ಐ, ದಯಾನಂದ ಭೇಟಿ ನೀಡಿ, ನಿಂದಿಸಿದ ಯುವಕರ ಗುಂಪನ್ನ ಕರೆಸಿ ಕಾನೂನು ರೀತಿಯ ಕ್ರಮಕ್ಕೆ ಮುಂದಾದಾಗ, ಊರಿನ ಮುಖಂಡರು ಹಾಗೂ ಗ್ರಾಮಸ್ಥರು ನಮ್ಮಿಂದ ಆಗಿರುವ ತಪ್ಪನ್ನ ಕ್ಷಮಿಸಿ ಎಂದು ಡಾ.ಮಮತಾರವರ ಬಳಿ ಯುವಕರಿಂದ ಕ್ಷಮೆಯಾಚಿಸಿದ್ದಾರೆ.
ಇನ್ನೊಮ್ಮೆ ಹೀಗೆ ನಡೆದುಕೊಂಡರೆ ನಿಮ್ಮಗಳ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕಾಗುತ್ತದೆ ಎಂದು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಆರೋಗ್ಯ ತಪಾಸಣೆಗೆ ಬರುವ ಆಶಾ ಕಾರ್ಯಕರ್ತಯರು ಹಾಗೂ ವೈದ್ಯರ ಬಳಿ ಸೌಜನ್ಯದಿಂದ ವರ್ತಿಸಬೇಕೆಂದು ಹೇಳಿ ವಾರ್ನ್ ಮಾಡಿದ್ದಾರೆ.