ಚಿಕ್ಕಬಳ್ಳಾಪುರ: ಟ್ರಾಫಿಕ್ ಪೊಲೀಸರ ಬೇಜವಬ್ದಾರಿ ತನದಿಂದ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ನಡೆದಿದೆ. ಚಿಕ್ಕಬಳ್ಳಾಪುರದ ನಿವಾಸಿ 24 ವರ್ಷದ ಅನಂತ್ ಸಾವನ್ನಪ್ಪಿದ ದುರ್ದೈವಿ. ಈತ ಚಿಕ್ಕಬಳ್ಳಾಪುರ ದ ಜಿ.ಎಸ್.ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸಿದ್ದಲಿಂಗಪ್ಪ ಎಂಬುವರ ಪುತ್ರ ಎಂದು ತಿಳಿದು ಬಂದಿದೆ.
ಚಿಕ್ಕಬಳ್ಳಾಪುರದಿಂದ ಬೆಂಗಳೂರು ಕಡೆ ಬೈಕ್ ನಲ್ಲಿ ಸ್ನೇಹಿತನ ಜೊತೆ, ದೇವನಹಳ್ಳಿ ಬಳಿಯ ನಂದಿ ಉಪಚಾರ್ ಮಾರ್ಗದಲ್ಲಿ ಹೋಗ್ತಿರುವಾಗ ಈ ಘಟನೆ ಸಂಭವಿಸಿದೆ. ಬೈಕ್ ಮುಂದೆ ಚಲಿಸುತ್ತಿದ್ದ ಕ್ಯಾಂಟರ್ ನ್ನು ನಿಲ್ಲಿಸಲು ಮುಂದಾಗಿದ್ದ ಟ್ರಾಫಿಕ್ ಪೊಲೀಸರನ್ನ ತಪ್ಪಿಸಲು ಹೋಗಿ ಅನಂತ್ ಡಿವೈಡರ್ ಗೆ ಬೈಕ್ ಗುದ್ದಿದ್ದಾನೆ. ಹೆಲ್ಮೆಟ್ ಇದ್ರೂ ಬೈಕ್ ಸ್ಪೀಡ್ ಗೆ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಸಂಚಾರಿ ನಿಯಮಗಳನ್ನ ಉಲ್ಲಂಘಿಸುವವರ ವಿರುದ್ದ ಕ್ರಮ ಕೈಗೊಳ್ಳಲು ಪೊಲೀಸರು ಇದೇ ಸ್ಥಳದಲ್ಲಿ ಪ್ರತಿದಿನ ನಿಲ್ಲುತ್ತಾರೆ. ಆದ್ರೆ, ಇದು ಅವೈಜ್ಞಾನಿಕವಾಗಿದೆ ಅಂತಾ ಸಾರ್ವಜನಿಕರು ಆರೋಪಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಆಗಿರೋದ್ರಿಂದ ವಾಹನಗಳು ತುಂಬಾ ವೇಗದಲ್ಲಿರುತ್ತವೆ. ಈ ವೇಳೆ ಪೊಲೀಸರು ದಿಢೀರ್ ಅಂತಾ ನಿಲ್ಲಿಸಲು ನೋಡಿದಾಗ ಈ ರೀತಿಯ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಈ ಬಗ್ಗೆ ಸೂಕ್ರ ಕ್ರಮ ತೆಗೆದುಕೊಳ್ಳಬೇಕು ಅಂತಾರೆ ಸ್ಥಳೀಯರು. ಅಂತರಾಷ್ಟ್ರೀಯ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ