ಮೆದುಳು ಜ್ವರದಿಂದ ಬಿಹಾರದಲ್ಲಿ ಮಕ್ಕಳ ಮರಣ ಮೃದಂಗ ಜೋರಾಗಿದೆ. ಇದ್ರಿಂದಾಗಿ ಹೆತ್ತವರ ಒಡಲಿಗೆ ಬೆಂಕಿಬಿದ್ದಂತೆಯಾಗಿದ್ದು, ಸೃಷ್ಟಿಕರ್ತನಿಗೆ ಹಿಡಿಶಾಪ ಹಾಕ್ತಿದ್ದಾರೆ. ಈ ಮಹಾದುರಂತಕ್ಕೆ ಕಾರಣ ಏನು ಅನ್ನೋದರ ಕುರಿತು ಡಾ. ಅಭಯ ಕುಲಕರ್ಣಿ ಅವರ ಲೇಖನ ಇಲ್ಲಿದೆ…
ವೈರಸ್ ಅಥವಾ ಬ್ಯಾಕ್ಟೇರಿಯಾದಿಂದ ಮೆದುಳಿನಲ್ಲಿ ಬಾವು ಅಥವ ಊತ ಕಾಣಿಸಿಕೊಳ್ಳುವುದನ್ನ ಎನ್ ಸೆಫಲೈಟಿಸ್ ಅಂತಾ ಹೇಳಲಾಗುತ್ತೆ. ಇದರಿಂದಾಗಿ ಮೆದುಳಿಗೆ ತೀವ್ರ ಸೋಂಕು ತಗುಲಿದಾಗ, ಪ್ರಜ್ಞೆ ಕಳೆದುಕೊಳ್ಳುವುದು ಮತ್ತು ಕೋಮಾ ಸ್ಥಿತಿಗೂ ತಲುಪುವ ಸಾಧ್ಯತೆ ಇರುತ್ತೆ. ಸೋಂಕಿನ ಪ್ರಮಾಣ ಹೆಚ್ಚಾಗಿದ್ದರೆ ಸಾವು ಸಂಭವಿಸುತ್ತೆ. ಬಿಹಾರದಲ್ಲಿ ಎನ್ ಸೆಫಲೈಟಿಸ್ ಸೋಂಕಿನ ಪ್ರಮಾಣ ತೀವ್ರವಾಗಿರೋದ್ರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.
ಸೋಂಕಿಗೆ ಕಾರಣ:
ಮೆದುಳು ಸೋಂಕಿಗೆ ಕಾರಣ ಏನು ಅಂತಾ ನೋಡಿದ್ರೆ, ಕಡಿಮೆ ಇಮ್ಯೂನಿಟಿ, ರೋಗನಿರೋಧಕತೆ ಬಗ್ಗೆ ಪೋಷಕರಲ್ಲಿರುವ ಅಜ್ಞಾನ, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸರಿಯಿಲ್ಲದಿರುವುದು, ಬಡತನದಿಂದಾಗಿ ಚಿಕಿತ್ಸೆ ಕೊಡಿಸುವಲ್ಲಿ ಆಗುವ ವಿಳಂಭದಿಂದ ಸೋಂಕಿನ ಪ್ರಮಾಣ ಹೆಚ್ಚಾಗುತ್ತೆ.
ಸಾವು ಹೆಚ್ಚಾಗಲು ಕಾರಣ ಏನು ಅಂತಾ ನೋಡಿದ್ರೆ, ರೋಗನಿರೋಧಕ ಶಕ್ತಿ ಕಡಿಮೆ ಇರೋದು, ಮಾಲ್ ನ್ಯೂಟ್ರಿಷಿಯನ್ ಕೊರತೆ, ಆಸ್ಪತ್ರೆಗೆ ಸೇರಿದ ವ್ಯಕ್ತಿಗೆ ಸಿಗದ ಮೌಲಸೌಕರ್ಯ, ಸರಿಯಾಗಿ ಔಷಧಿ ಪೂರೈಕೆ ಇಲ್ಲದಿರುವುದು, ಐಸಿಯು ವ್ಯವಸ್ಥೆಯಿಲ್ಲದೇ ಇರೋದು, ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ಉಳಿಸಲು ಬೇಕಾದ ಔಷಧಿಗಳು ಸಮರ್ಪಕವಾಗಿ ದೊರೆಯದೇ ಇರೋದು ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ. ಆರೋಗ್ಯ ಸೇವೆ ಬಗ್ಗೆ ಸರ್ಕಾರಗಳು ಸರಿಯಾದ ರೀತಿಯಲ್ಲಿ ಕಾಳಜಿ ತೋರಿಸ್ತಿಲ್ಲ ಅನ್ನೋದಕ್ಕೆ ಇದೆಲ್ಲ ಸಾಕ್ಷಿ.
ಸೋಂಕು ತಡೆಯುವುದು ಹೇಗೆ?
ಹೆಚ್ಚೆಚ್ಚು ಸಾರ್ವಜನಿಕ ಆರೋಗ್ಯ ಸೇವೆಗಳನ್ನ ಒದಗಿಸುವುದು. ರೋಗನಿರೋಧಕ ಶಕ್ತಿಯ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸರಿಯಾದ ಟೈಂನಲ್ಲಿ ಚಿಕಿತ್ಸೆ ನೀಡುವುದು. ಐಸಿಯು ಕೇರ್ ಗಳ ಸಂಖ್ಯೆ ಹೆಚ್ಚು ಮಾಡಬೇಕು. ನುರಿತ ವೈದ್ಯರನ್ನ ಹಾಗೂ ನರ್ಸ್ ಗಳನ್ನ ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಬೇಕು. ವೈದ್ಯರು ಹೇಳಿದ ಔಷಧಿ ತುರ್ತಾಗಿ ಸಿಗುವ ವ್ಯವಸ್ಥೆಯಾಗಬೇಕು. ಆದ್ರೆ, ಈ ಸೇವೆಗಳು ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಟೈಂಗೆ ಸಿಗದೇ ಇರೋದು ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತೆ. ಇನ್ನು ಮಾನವೀಯತೆ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳು ಹಾಗೂ ಅಲ್ಲಿನ ವೈದ್ಯರು ಈ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಅಂದಾಗ ಇದನ್ನ ಒಂದು ಹಂತಕ್ಕೆ ಕಂಟ್ರೋಲ್ ಮಾಡಬಹುದು.
ಈಗಾಗ್ಲೇ ಸಾವಿನ ಸಂಖ್ಯೆ 141ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 85 ಮಕ್ಕಳಿದ್ದಾರೆ. ಇದು ನಿಜಕ್ಕೂ ಅತ್ಯಂತ ನೋವಿನ ಸಂಗತಿ. ಹೀಗಾಗಿ ಸರ್ಕಾರ ಈ ನಿಟ್ಟಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಬೇಗ ಗುಣಮಟ್ಟದ ಆರೋಗ್ಯ ಸೇವೆಯನ್ನ ನಿಡಬೇಕು. ಈ ಬಗ್ಗೆ ಪೋಷಕರು ಸಹ ಹೆಚ್ಚು ಕಾಳಜಿ ವಹಿಸಬೇಕಾಗಿದೆ.
ನಿರೂಪಣೆ: ನಾಗೇಶ ತಳವಾರ