ಪ್ರಜಾಸ್ತ್ರ ಸುದ್ದಿ
ಸಿಂದಗಿ: ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಸೋಮವಾರ ಸತ್ಯ ಪ್ರತಿಪಾದನಾ ಹೋರಾಟ ನಡೆಸಲಾಯಿತು. ಕರ್ನಾಟಕ ಬೇಡ ಜಂಗಮ ತಾಲೂಕು ಘಟಕ, ಕ್ಷೇಮಾಭಿವೃದ್ಧಿ ಸಂಘ ವಿಜಯಪುರ ಹಾಗೂ ವಿವಿಧ ಮಠಾಧೀಶರ ನೇತೃತ್ವದಲ್ಲಿ ಹೋರಾಟ ನಡೆಸಲಾಯಿತು.
ಪಟ್ಟಣದ ಸಾರಂಗ ಮಠದಿಂದ ಮೆರವಣಿಗೆ ಪ್ರಾರಂಭಿಸಿ, ವಿವೇಕಾನಂದ ಸರ್ಕಲ್, ಟಿಪ್ಪು ಸುಲ್ತಾನ್ ಸರ್ಕಲ್, ಅಂಬೇಡ್ಕರ್ ಸರ್ಕಲ್, ಅಂಬಿಗೇರ ಚೌಡಯ್ಯ ಸರ್ಕಲ್, ಸಂಗೊಳ್ಳಿ ರಾಯಣ್ಣ ಸರ್ಕಲ್, ಬಸವೇಶ್ವರ ಸರ್ಕಲ್ ಮೂಲಕ ಹಾಯ್ದು ತಾಲೂಕು ಆಡಳಿತ ಕಚೇರಿ ತಲುಪಲಾಯಿತು. ಈ ವೇಳೆ ಸಮಾಜದ ಹಲವು ಮುಖಂಡರು ಮಾತನಾಡಿ, ನಮಗೆ ನ್ಯಾಯುತವಾಗಿ ಸಿಗಬೇಕಾದ ಪ್ರಮಾಣ ಪತ್ರ ಸಿಗುವ ತನಕ ಹೋರಾಟ ಮಾಡುತ್ತೇವೆ ಎಂದರು. ನಂತರ ಗ್ರೇಡ್-2 ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಾರಂಗಮಠದ ಪ್ರಭು ಸಾರಂಗದೇವ ಶಿವಾಚಾರ್ಯರು, ಹಿರಿಯ ಮಠದ ಶಿವಾನಂದ ಶಿವಾಚಾರ್ಯರು, ಯಂಕಂಚಿಯ ಅಭಿನವ ರುದ್ರಮುನಿ ಶಿವಾಚಾರ್ಯರು, ಬೋರಗಿ ಪುರದಾಳದ ತಪೋರತ್ನ ಮಹಾಲಿಂಗೇಶ್ವರ ಸ್ವಾಮೀಜಿ, ನಿವಾಳಖೇಡದ ಗುರು ಸಂಗಬಸವ ಸ್ವಾಮೀಜಿ, ಮಡಿವಾಳ ಮಹಾಸ್ವಾಮೀಜಿ, ಗುರುಲಿಂಗ ಶಿವಾಚಾರ್ಯರು, ಸಿದ್ಧಲಿಂಗ ಶಿವಾಚಾರ್ಯರು ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು, ಸಮಾಜದ ಹಲವು ಮುಖಂಡರು ಭಾಗವಹಿಸಿದ್ದರು.