ಸಿಂದಗಿ: ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಪಟ್ಟಣದ ಬಸ್ ನಿಲ್ದಾಣ ಬಳಿಯಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ‘ಬೇಂದ್ರೆ ಅಜ್ಜನ’ ಕವನ ವಾಚನ ಹಾಗೂ ಎಸ್ಎಸ್ಎಲ್ ಸಿ ಪರೀಕ್ಷಾ ಮಾರ್ಗದರ್ಶಿ ಕಾರ್ಯಕ್ರಮ ನಡೆಸಲಾಯ್ತು. ಉದ್ಘಾಟನೆ, ಹಾರ ತೂರಾಯಿ ಅನ್ನೋ ಯಾವುದೇ ಸಿದ್ಧಮಾದರಿಯ ಸೂತ್ರವಿಲ್ಲದೆ ಕಾರ್ಯಕ್ರಮ ನಡೆಸಲಾಯ್ತು.
ಈ ವೇಳೆ ಪ್ರಾಸ್ತಾವಿಕವಾಗಿ ಮಾತ್ನಾಡಿದ ಮಾಸಪ ಅಧ್ಯಕ್ಷ ಅಶೋಕ ಬಿರಾದಾರ, ನಮ್ಮ ಪರಿಷತ್ ಉದ್ಘಾಟನೆಯಾದ್ಮೇಲೆ ನಡೆಯುತ್ತಿರುವ ಮೊದಲ ಕಾರ್ಯಕ್ರಮವಿದು. ಇದನ್ನ ಸರ್ಕಾರ ಶಾಲೆಯ ಮುಖೇನ ಶುರು ಮಾಡಬೇಕು ಅನ್ನೋದು ನಮ್ಮ ಆಶೆಯವಾಗಿತ್ತು ಅಂತಾ ಹೇಳಿದ್ರು. ಮಕ್ಕಳಲ್ಲಿ ಸಾಹಿತ್ಯ, ಸಂಸ್ಕೃತಿಯ ಪ್ರಜ್ಞೆ ಮೂಡಿಸುವ ಕೆಲಸ ಮಾಡಲಾಗುತ್ತೆ. ಪ್ರತಿ ತಿಂಗಳು ಒಂದೆರಡು ಕಾರ್ಯಕ್ರಮಗಳನ್ನ ಮಾಡಲಾಗುತ್ತೆ. ಮಕ್ಕಳ ಸಾಹಿತ್ಯ ಸಮ್ಮೇಳನ, ಶಿಬಿರವನ್ನ ಆಯೋಜಿಸುವ ಆಲೋಚನೆ ಇದೆ ಅಂತಾ ಹೇಳಿದ್ರು.
ಕವನ ವಾಚನ ಸ್ಪರ್ಧೆಯಲ್ಲಿ ಪ್ರಭಾವತಿ ಮಾಳೆಗಾರ, ಕಲ್ಲಮ್ಮ ಗಡೇದ, ಲಕ್ಷ್ಮಿ ಬಿರಾದಾರ, ಭಾಗ್ಯಶ್ರೀ ಕಾಡಂಗೇರಿ, ನಬಿಲಾನ, ಲಕ್ಷ್ಮಿ ಭಾವಿಮನಿ, ಪ್ರತಿಕ್ಷಾ ಹೂಗಾರ, ಅಮೃತಾ ಮೇಲಿನಮಠ, ಬಸಮ್ಮ ಹೊಸಮನಿ, ಸನಾ ಕರ್ಜಗಿ, ನಾಗಮ್ಮ ದೊಡ್ಡಮನಿ ಹಾಗೂ ಸುಚಿತ್ರಾ ಪೂಜಾರಿ ಭಾಗವಹಿಸಿದ್ರು. ಸನಾ ಕರ್ಜಗಿ (ಪ್ರಥಮ), ಭಾಗ್ಯಶ್ರೀ ಕಾಡಂಗೇರಿ(ದ್ವಿತೀಯ) ಹಾಗೂ ನಾಗಮ್ಮ ದೊಡ್ಡಮನಿ(ತೃತೀಯ) ಬಹುಮಾನ ಪಡೆದ್ರು.
ನಿರ್ಣಾಯಕರಾದ ಎಸ್.ಎಸ್ ಅವಟಿ ಮಾತ್ನಾಡಿ, ಕವಿತೆ ವಾಚನ ಬೇರೆ. ಗಾಯನ ಬೇರೆ. ಮಕ್ಕಳು ಮೊದಲು ಇದನ್ನ ತಿಳಿದುಕೊಳ್ಳಬೇಕು. ವಾಚನ ಹಾಡಿದಂತಿರಬೇಕು. ಹಾಡು ವಾಚನದಂತಿರಬೇಕು. ಪ್ರತಿಯೊಂದು ಪದಕ್ಕೂ ಒಂದೊಂದು ಭಾವ ಇರುತ್ತೆ. ಹೀಗಾಗಿ ಕವಿತೆ ವಾಚಿಸುವಾಗ ಪದಗಳನ್ನ ನುಂಗಬಾರದು ಅಂತಾ ಹೇಳುವ ಮೂಲಕ ಕವಿತೆ ವಾಚಿಸುವ ಶೈಲಿ ಕುರಿತು ತಿಳುವಳಿಕೆ ಮೂಡಿಸಿದ್ರು.
ಕವಿತೆ ವಾಚನ ಸ್ಪರ್ಧೆ ಬಳಿಕ ಕ್ಷೇತ್ರ ಸಮನ್ವಯ ಅಧಿಕಾರಿ ಸಂತೋಷಕುಮಾರ ಬೀಳಗಿ, ಎಸ್ಎಸ್ಎಲ್ ಸಿ ಪರೀಕ್ಷಾ ಮಾರ್ಗದರ್ಶಿ ಕುರಿತು ಉಪನ್ಯಾಸ ನೀಡಿದ್ರು. ಸರ್ಕಾರಿ ಪ್ರೌಢಶಾಲೆ ಮುಖ್ಯಗುರುಗಳಾದ ಶಿವಾನಂದ ಶಹಾಪೂರ ಅಧ್ಯಕ್ಷತೆ ವಹಿಸಿಕೊಂಡಿದ್ರು. ನಿರ್ಣಾಯಕರಾಗಿ ವಿ.ಕೆ ಕಲ್ಕರ್ಣಿ ಭಾಗವಹಿಸಿದ್ರು. ಸಿದ್ಧರಾಮ ಅಗಸರ, ಡಾ.ಪ್ರಕಾಶ, ಜ್ಞಾನೇಶ ಗುರವ, ಅಶೋಕ ಎಂ ವೇದಿಕೆ ಹಂಚಿಕೊಂಡಿದ್ರು.
ಸಾಯಬಣ್ಣ ದೇವರಮನಿ, ಸಿದ್ದು ಪೂಜಾರಿ, ಶಿಕ್ಷಕರಾದ ಶರಣಪ್ಪ ಕೇಸರಿ, ಶೋಭಾ ಕೋಳಕೆರ ಸೇರಿದಂತೆ ಅನೇಕರು ಉಪಸ್ಥಿತರಿದ್ರು. ವಿದ್ಯಾರ್ಥಿನಿ ಲಕ್ಷ್ಮಿ ಬಿರಾದಾರ ಸ್ವಾಗತಿಸಿದ್ರು. ವಿದ್ಯಾರ್ಥಿನಿಯರಾದ ಅಮೃತಾ ಮೇಲಿನಮಠ, ಸನಾ ಕರ್ಜಗಿ ನಿರೂಪಿಸಿದ್ರು. ಶಿಕ್ಷಕರಾದ ಎಸ್.ಎಸ್ ಅವಟಿ ವಂದಿಸಿದ್ರು.