ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹಿರಿಯೂರು ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು. ಪತಿ ಟಿ.ಪಿ ಶ್ರೀನಿವಾಸ್ ಜೊತೆಗೆ ಕಾಂಗ್ರೆಸ್ ಸೇರ್ಪಡೆಯಾದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಚಿವರು, ವಿಧಾನ ಪರಿಷತ್ ಸದಸ್ಯರು ಸೇರಿ ಅನೇಕರಿದ್ದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪೂರ್ಣಿಮಾ ತಂದೆ ಎ.ಕೃಷ್ಣಪ್ಪ ಕಾಂಗ್ರೆಸ್ ಬಿಡಲು ನಾನೂ ಕಾರಣ. 2013ರಲ್ಲಿ ಪಕ್ಷ ದ್ರೋಹ ಮಾಡಿದ ಭೈರತಿ ಬಸವರಾಜಗೆ ಟಿಕೆಟ್ ಕೊಡಿಸಲು ಹೋಗಿ ಎ.ಕೃಷ್ಣಪ್ಪಗೆ ಅನ್ಯಾಯವಾಯಿತು. ಹೀಗಾಗಿ ಅವರು ಪಕ್ಷ ತೊರೆದರು. ಇದೀಗ ಅವರ ಮಗಳು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಯಾಕಂದರೆ, ಅವರದ್ದು ಕಾಂಗ್ರೆಸ್ ರಕ್ತವಾಗಿದೆ ಎಂದರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಮಾಜಿ ಶಾಸಕಿ ಪೂರ್ಣಿಮಾ, ಕಾಂಗ್ರೆಸ್ ನ ಕೃಷ್ಣಪ್ಪ ಎಂದೇ ನಮ್ಮ ಕುಟುಂಬವನ್ನು ಗುರುತಿಸುತ್ತಿದ್ದರು. ಅನಿವಾರ್ಯ ಕಾರಣದಿಂದ ಅವರು ಕಾಂಗ್ರೆಸ್ ತೊರೆದರು. ಅವರ ಇಚ್ಛೆಯಂತೆ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದರು.
ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ನಮ್ಮದೆ ತಪ್ಪುಗಳಿಂದ ಕೊಂಡಿ ಕಳಿಚಿತ್ತು. ಇದೀಗ ಮತ್ತೆ ಬೆಸೆದಿದೆ. ಬಹಳ ದಿನಗಳಿಂದ ಪೂರ್ಣಿಮಾ, ಅವರ ಪತಿ ಶ್ರೀನಿವಾಸ್ ಗೆ ಗಾಳ ಹಾಕುತ್ತಿದ್ದೆ. ಇಂದು ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದು ಬಹಳ ಸಂತೋಷದ ದಿನ ಅಂತಾ ಹೇಳಿದರು.