ಸಿಂದಗಿ: ಮಂದಾರ ಪಬ್ಲಿಕ್ ಸ್ಕೂಲ್ ಮತ್ತು ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಆಯೋಜಿಸಿದ್ದ ಮಂದಾರ್ ವಿರಾಸತ್ 2019ರ ಕಾರ್ಯಕ್ರಮದಲ್ಲಿ ಅನುಪಮ ಪಿ ಅವರ ಚೊಚ್ಚಲ ಕೃತಿ ‘ಮನದ ಮಲ್ಲಿಗೆ’ ಕವನ ಸಂಕಲನ ಬಿಡುಗಡೆಗೊಳಿಸಲಾಯ್ತು. ಮಾತೋಶ್ರೀ ಕಾಶಿಬಾಯಿ ಬ ಚೌಧರಿ ವೇದಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞರಾದ ಹೆಚ್.ಟಿ ಕುಲಕರ್ಣಿ ಅವರು ಕೃತಿ ಬಿಡುಗಡೆಗೊಳಿಸಿದ್ರು.
ಪುಸ್ತಕ ಪರಿಚಯ ಮಾಡಿದ ಹಿರಿಯ ಸಾಹಿತಿ ಪ.ಗು ಸಿದ್ದಾಪೂರ, ಬದುಕಿನಲ್ಲಿ ಕವಯತ್ರಿ ಕಂಡೂಂಡು ನೋವು, ಯಾತನೆ, ಸಂಕಷ್ಟ, ತಳಮಳ, ಪುರುಷ ಸಮಾಜದಲ್ಲಿ ಹೆಣ್ಣಿನ ಮೇಲಾಗ್ತಿರುವ ದೌರ್ಜನ್ಯಗಳಿಗೆ ಕಾವ್ಯದ ರೂಪ ನೀಡಿದ್ದಾರೆ ಅಂತಾ ಹೇಳಿದ್ರು.
ಅಧ್ಯಕ್ಷತೆ ವಹಿಸಿ ಮಾತ್ನಾಡಿದ ಡಾ.ಬಿ.ಆರ್ ನಾಡಗೌಡ ಅವರು, ಭಾಷೆ ದೇಶವನ್ನ ಕಟ್ಟಿದೆ. ಸಾಹಿತ್ಯ ಸಂಸ್ಕಾರ, ಸಂಸ್ಕೃತಿಯನ್ನ ಕಟ್ಟಿದೆ ಅಂತಾ ಹೇಳಿದ್ರು. ದಲಿತ, ಬಂಡಾಯ, ನವ್ಯ, ನವೋದಯ ಎಂದು ಸಾಹಿತ್ಯವನ್ನ ಆಯಾ ಕಾಲಘಟದಲ್ಲಿ ವರ್ಗೀಕರಣ ಮಾಡಲಾಗಿದೆ. ನಮ್ಮಲ್ಲಿನ ಭಾವನೆಗಳಿಗೆ ಭಾಷೆಯ ಸ್ಪರ್ಶ ನೀಡಿದಾಗ ಕಾವ್ಯ ಹೊರಹೊಮ್ಮುತ್ತೆ ಅಂತಾ ಹೇಳಿದ್ರು. ಕವಯತ್ರಿ ಅನುಪಮ ಪಿ ಮಾತ್ನಾಡಿ, ಚೊಚ್ಚಲ ಕೃತಿ ಜನ್ಮ ತಾಳಿದ ಬಗ್ಗೆ ಚುಟುಕಾಗಿ ಹೇಳಿದ್ರು.
ಇದೇ ವೇಳೆ ಬಸವರಾಜ ಅಗಸರ, ಮಹಾಂತೇಶ ನೂಲಾನವರ, ಪದ್ಮಾರವಿ, ಮುತ್ತು ಬ್ಯಾಕೋಡ, ಗುಂಡಣ್ಣ ಕುಂಬಾರ, ಈರಣ್ಣಗೌಡ ಬಿರಾದಾರ ಹಾಗೂ ಕಲ್ಯಾಣಕುಮಾರ ಪೂಜಾರಿ ಕವನ ವಾಚನ ಮಾಡಿದ್ರು. ಮುಖ್ಯ ಅತಿಥಿಗಳಾಗಿ ಕಾನಿಪ ಅಧ್ಯಕ್ಷ ಆನಂದ ಶಾಬಾದಿ, ಮಸಾಪ ಆಲಮೇಲ ಅಧ್ಯಕ್ಷ ಪಂಡಿತ ಅವಜಿ, ಚುಸಾಪ ಅಧ್ಯಕ್ಷ ಎಂ.ಎನ್ ಚಪ್ಪರಬಂಧ, ಪ್ರಜಾಸ್ತ್ರ ವೆಬ್ ಪತ್ರಿಕೆ ಸಂಪಾದಕ ನಾಗೇಶ ತಳವಾರ ಭಾಗವಹಿಸಿದ್ರು.
ಡಾ.ಪ್ರಕಾಶ ಸ್ವಾಗತ ಗೀತೆ ಹಾಡಿದ್ರು. ಸಿದ್ದಲಿಂಗ ಚೌಧರಿ ಪ್ರಾಸ್ತಾವಿಕ ನುಡಿಗಳನ್ನ ಆಡಿದ್ರು. ಗುಂಡಪ್ಪ ಕುಂಬಾರ ಸ್ವಾಗತಿಸಿದ್ರು. ಅಶೋಕ ಬಿರಾದಾರ ನಿರೂಪಣೆ ಹಾಗೂ ವಂದನಾರ್ಪಣೆ ಮಾಡಿದ್ರು.