ಪ್ರಜಾಸ್ತ್ರ ಅಪರಾಧ ಸುದ್ದಿ
ಮಂಗಳೂರು: ಪಬ್ ಜಿ ಆಟದಲ್ಲಿ ನಿರಂತರವಾಗಿ ಸೋಲಿಸುತ್ತಿದ್ದ ಅನ್ನೋ ಕಾರಣಕ್ಕೆ 6ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯನ್ನ ಕೊಲೆ ಮಾಡಿದ ಭಯಾನಕ ಘಟನೆ ಉಳ್ಳಾದಲ್ಲಿ ನಡೆದಿದೆ. ಭಾನುವಾರ ಬೆಳಗ್ಗೆ ಉಳ್ಳಾದ ಮೈದಾನದಲ್ಲಿ ಪತ್ತೆಯಾಗಿದ್ದ ಬಾಲಕ ಆಕಿಫ(12) ಮೃತದೇಹದ ಕುರಿತು ನಡೆದ ತನಿಖೆಯಲ್ಲಿ ಈ ವಿಚಾರ ಬಹಿರಂಗವಾಗಿದೆ.
ಕೆ.ಸಿ ರೋಡ್ ಕೋರಮಂಗಲ ನಿವಾಸಿ ಹನೀಫ ಎಂಬುವರ ಮಗ ಆಕಿಫ ಹಾಗೂ ದೀಪಕ ಅನ್ನೋ ಹುಡ್ಗನ ನಡುವೆ ನಡೆದ ಗಲಾಟೆ ಸಾವಿನಲ್ಲಿ ಅಂತ್ಯವಾಗಿದೆ. ಪಬ್ ಜಿ ಆಟದಲ್ಲಿ ನಿರಂತರವಾಗಿ ಸೋಲಿಸುತ್ತಿದ್ದ ವಿಚಾರಕ್ಕೆ ದ್ವೇಷ ಬೆಳೆದು, ಬಾಲಕನ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ಆಕಿಫ ಹಾಗೂ ಉತ್ತರ ಪ್ರದೇಶ ಮೂಲದ ದೀಪಕ ಪಬ್ ಜಿ ಆಡುತ್ತಿದ್ದರು. ಈ ಆಟದಲ್ಲಿ ದೀಪಕ ಸತತವಾಗಿ ಸೋಲುತ್ತಿದ್ದ. ಹೀಗಾಗಿ ದೀಪಕ, ನೀನು ಮೊಬೈಲ್ ಮತ್ತೊಬ್ಬರ ಕೈಯಲಿ ಕೊಟ್ಟು ಸೋಲುಸ್ತಿದಿಯಾ. ನನ್ನ ಜೊತೆ ನೇರವಾಗಿ ಆಟಕ್ಕೆ ಬಾ ಎಂದು ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಕರೆದಿದ್ದಾನೆ. ಆಗ ಆಕಿಫ ಹೋಗಿದ್ದಾನೆ.
ಆಕಿಫ ಹಾಗೂ ದೀಪಕ ಫಲಾಹ ಸ್ಕೂಲ್ ಬಳಿ ಆಟವಾಡಿದ್ದಾರೆ. ಅಲ್ಲಿ ಆಕಿಫ ಸೋತಿದ್ದಾನಂತೆ. ಹೀಗಾಗಿ ದೀಪಕ ಅವನಿಗೆ ಅವಮಾನಿಸಿದ್ದಾನೆ. ಆಗ ಇಬ್ಬರ ನಡುವೆ ಜಗಳವಾಗಿದೆ. ಆರೋಪಿ ದೀಪಿಕ ಕಲ್ಲುಗಳನ್ನ ಎಸೆದಿದ್ದಾನೆ. ಇದ್ರಿಂದ ಆಕಿಫ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯವಾಗಿ ಕುಸಿದು ಬಿದ್ದಿದ್ದಾನೆ. ಅವನನ್ನ ಕಾಂಪೌಂಡ್ ಗೋಡೆ ಹತ್ತಿರ ಒಯ್ದು ಮಲಗಿಸಿ ಅಲ್ಲಿಂದ ಹೋಗಿದ್ದಾನೆ. ಇತ್ತ ಆಕಿಫ ಮನೆಯವರು ಅವನನ್ನ ಹುಡುಕಿದ್ದಾರೆ. ಇವನ ಜೊತೆ ಪಬ್ ಜಿ ಆಡ್ತಿದ್ದ ದೀಪಕನನ್ನ ವಿಚಾರಿಸಿದ್ರೆ ಅವನು ಅವರ ಮುಂದೆ ಕಥೆ ಕಟ್ಟಿದ್ದಾನೆ. ಮಗನನ್ನ ಹುಡುಕಿ ಹುಡುಕಿ ಸಾಕಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಭಾನುವಾರ ಬೆಳಗ್ಗೆ ಬಾಲಕನ ಮೃತದೇಹ ಪತ್ತೆಯಾದ್ಮೇಲೆ ಪೊಲೀಸರು ತನಿಖೆ ನಡೆಸಿದಾಗ, ಈ ಭಯಾನಕ ಸತ್ಯ ಹೊರ ಬಂದಿದೆ. ಒಂದು ಮೊಬೈಲ್ ಆಟ ಒಂದು ಜೀವವನ್ನೇ ಬಲಿ ಪಡೆದಿದೆ.