ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸೋಮವಾರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಮಾಡಲು ಏನೆಲ್ಲ ಕ್ರಮಗಳನ್ನ ತೆಗೆದುಕೊಳ್ಳಬೇಕು? ಈಗಿರುವ ನಿಯಮಗಳು ಸಾಕೆ? ವೀಕೆಂಡ್ ಕರ್ಫ್ಯೂನಂತೆ ಮುಂದಿನ ಕೆಲ ದಿನಗಳ ಕಾಲ ವಾರಪೂರ್ತಿ ಕರ್ಫ್ಯೂ ಜಾರಿ ಮಾಡಬೇಕೆ ಅನ್ನೋದು ಸೇರಿದಂತೆ ಹಲವು ವಿಚಾರಗಳು ಚರ್ಚೆಗೆ ಬರ್ತಿವೆ.
ಸರ್ಕಾರದ ಎದುರು ಕರೋನಾ ನಿಯಂತ್ರಣದ ಜೊತೆಗೆ ಜನರ ಬದುಕು ಸಹ ಇದೆ. ವೀಕೆಂಡ್ ಕರ್ಫ್ಯೂಗೆ ಜನ ಸ್ಪಂದಿಸಿದ್ದಾರೆ ಅನ್ನೋ ಒಂದೇ ಕಾರಣಕ್ಕೆ ಲಾಕ್ ಡೌನ್ ಮಾಡುವುದಾಗಲಿ, ವಾರಪೂರ್ತಿ ಕರ್ಫ್ಯೂ ಮಾಡುವುದಾಗಲಿ ಒಳ್ಳೆಯದಲ್ಲ. ಜನರ ಜೀವನ, ಆರ್ಥಿಕ ಸ್ಥಿತಿ ಸುಧಾರಣೆಗೆ ಬರಬೇಕು, ಜನರು ದುಡಿದು ಜೀವನ ಮಾಡಬೇಕು ಅನ್ನೋದಾದ್ರೆ ಲಾಕ್ ಡೌನ್ ಮಾಡಲೇಬಾರದು.
ಲಾಕ್ ಡೌನ್, ಕರ್ಫ್ಯೂ ಇಲ್ಲದೆ ಕೋವಿಡ್ ನಿಯಂತ್ರಿಸಲು, ಜನರ ಸಾವು ನೋವು ತಪ್ಪಿಸಲು ಏನು ಮಾಡಬೇಕು ಅನ್ನೋದರ ಕಡೆ ಗಮನ ಇರಲಿ. ಯಾಕಂದ್ರೆ, ಜನರಿಗೆ ಸಮಸ್ಯೆ ಎದುರಿಸುವ ಶಕ್ತಿ ತುಂಬ ಬೇಕಿದೆ. ಅವರಲ್ಲಿ ಇನ್ನಷ್ಟು ಭಯ ಮೂಡಿಸಬಾರದು. ಖಾಸಗಿ ಆಸ್ಪತ್ರೆಗಳು ಶೇಕಡ 80 ರಷ್ಟು ಬೆಡ್ ಮೀಸಲು ಇಡಲು ಸಾಧ್ಯವಿಲ್ಲವೆಂದು ಹೇಳುತ್ತಿವೆ. ಸರ್ಕಾರಿ ಆಸ್ಪತ್ರೆಗಳು ಸ್ಥಿತಿ ಹೇಳಿಕೊಳ್ಳುವಂತಿಲ್ಲ. ಹೀಗಿರುವಾಗ ಜನರು ದುಡ್ಡು ಇಲ್ಲದೆ ಈಗಿರುವ ಸಮಸ್ಯೆ ಎದುರಿಸುವುದು ಕಷ್ಟ. ಹೀಗಾಗಿ ಲಾಕ್ ಡೌನ್ ಮಾಡಿ ಜನರನ್ನ ಮತ್ತಷ್ಟು ಸಂಕಷ್ಟಕ್ಕೆ ತಳ್ಳುವುದು ಸರಿಯಾದ ನಿರ್ಧಾರವಲ್ಲ ಅನ್ನೋದು ಬಹುತೇಕರ ಅಭಿಪ್ರಾಯವಾಗಿದೆ.