ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಮಳೆಗಾಲದ ಅಧಿವೇಶನಕ್ಕೆ ಇಂದು ದಿನಾಂಕ ನಿಗದಿ ಮಾಡಲಾಗಿದೆ. ಸೆಪ್ಟೆಂಬರ್ 21ರಿಂದ 31ರ ತನಕ 10 ದಿನಗಳ ಕಾಲ ಅಧಿವೇಶನ ನಡೆಸಲು ಇಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ಮಸೂದೆಗಳಿಗೆ ಒಪ್ಪಿಗೆ ನೀಡಲಾಗಿದೆ. ಪರಿಶಿಷ್ಟ ಜಾತಿಯ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯ ಕಲ್ಪಿಸಲು 65.48 ಕೋಟಿ ಅನುದಾನ, ಕೊಳಚೆಪ್ರದೇಶಗಳ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ, ಚಾಮುಂಡೇಶ್ವರಿ ವಿದ್ಯುತ್ ನಿಗಮದ ಷೇರು ಬಂಡವಾಳ 1 ಸಾವಿರ ಕೋಟಿಯಿಂದ 1,250 ಕೋಟಿಗೆ ಹೆಚ್ಚಳ, ಭದ್ರಾವತಿ-ಶಿವಮೊಗ್ಗ ರೈಲು ನಿಲ್ದಾಣಗಳ ನಡುವೆ ಸೇತುವೆ ನಿರ್ಮಿಸಲು 13.45 ಕೋಟಿ, ಚಿಕ್ಕನಾಯಕನಹಳ್ಳಿಯಲ್ಲಿ ಮಿನಿವಿಧಾನಸೌಧ ನಿರ್ಮಾಣಕ್ಕೆ 16.5 ಕೋಟಿ ಬಿಡುಗಡೆ ಮಾಡಲಾಗಿದೆ.
ಇನ್ನು ಎಸ್ ಡಿಪಿಐ ನಿಷೇಧ ಸಂಬಂಧ ಸಹ ಗಂಭೀರ ಚರ್ಚೆ ನಡೆದಿದೆ. ಈ ಸಂಘಟನೆ ರಾಜಕೀಯ ಪಕ್ಷವಾಗಿಯೂ ಗುರುತಿಸಿಕೊಂಡಿರುವುದ್ರಿಂದ, ಇದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರ ಕುರಿತು ಗೃಹ ಇಲಾಖೆಯಿಂದ ಮಾಹಿತಿ ಪಡೆದು ನಂತರ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.