ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಮೇಶ ಜಾರಕಿಹೊಳಿ ಸಿಡಿ ವಿಚಾರ ಸಂಬಂಧ ಎಸ್ಐಟಿ ತನಿಖೆ ನಡೆಸ್ತಿದೆ. ಅದು ಇದೀಗ ಒಂದು ಹಂತಕ್ಕೆ ಬಂದಿದೆ. ಈ ಬಗ್ಗೆ ಸುದ್ದಿ ಮಾಧ್ಯಮ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ಮೇಲೆ ಚರ್ಚೆ ನಡೆಯುತ್ತಿದೆ. ಇಷ್ಟು ದಿನ ಕಾಣಿಸಿಕೊಳ್ಳದ ಯುವತಿಯ ವಿಡಿಯೋ ಹೇಳಿಕೆ ಇದೀಗ ಚರ್ಚೆಯ ವಸ್ತು.
ಸಿಡಿ ಅಸಲಿಯಾ ನಕಲಿಯಾ ಅನ್ನೋ ಚರ್ಚೆ. ಯುವತಿ ಹೇಳ್ತಿರುವುದು ಸತ್ಯನಾ ಸುಳ್ಳಾ ಅನ್ನೋ ಚರ್ಚೆ. ರಮೇಶ ಜಾರಕಿಹೊಳಿ ಎಲ್ಲಿ ಹೋದ್ರು ಏನು ಮಾಡ್ತಿದ್ದಾರೆ ಅನ್ನೋ ಚರ್ಚೆ. ಹೀಗೆ ಸಿಡಿಯ ಸುತ್ತಲೇ ಸುತ್ತುತ್ತಿರುವುದರಿಂದ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಏನು ನಡೀತಿದೆ ಅನ್ನೋದೆ ಜನರಿಗೆ ಗೊತ್ತಾಗುತ್ತಿಲ್ಲ.
ರಾಜ್ಯ ಸರ್ಕಾರ ಏನು ಮಂಡಿಸ್ತಿದೆ. ಬಜೆಟ್ ಮೇಲಿನ ಚರ್ಚೆ ಹೇಗೆ ನಡೆಯುತ್ತಿದೆ. ವಿಪಕ್ಷಗಳು ಯಾವೆಲ್ಲ ವಿಚಾರಗಳ ಮೇಲೆ ಪ್ರಶ್ನೆ ಮಾಡ್ತಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ, ಜಿಎಸ್ ಟಿ ಬಾರದೆ ಇರುವುದು, ಕೋವಿಡ್ 19 ಸಂದರ್ಭದಲ್ಲಿ ನಡೆದ ಗೋಲ್ಮಾಲ್ ಆರೋಪ ಸೇರಿದಂತೆ ಸಾಕಷ್ಟು ಗಂಭೀರ ವಿಚಾರಗಳ ಚರ್ಚೆ ನಡೆಯುತ್ತಿದೆ. ಆದ್ರೆ, ಈ ಬಗ್ಗೆ ಎಲ್ಲಿಯೂ ಚರ್ಚೆಯಾಗದೆ ಹೋಗ್ತಿದೆ. ಮಾರ್ಚ್ 31ರ ತನಕ ಇರುವ ಅಧಿವೇಶನದ ಕಾಲಪದ ಬಗ್ಗೆ ಜನರ ಗಮನಕ್ಕೆ ಬಾರದೆ ಇರುವುದು ದುರಂತ.