ಪ್ರಜಾಸ್ತ್ರ ಸುದ್ದಿ
ಕಲಬುರಗಿ: ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಕೆಲಸ ಪಡೆಯಬೇಕು ಅಂದರೆ ಯುವಕರು ಲಂಚ ಕೊಡಬೇಕು, ಯುವತಿಯರು ಮಂಚ ಹತ್ತಬೇಕಾಗಿದೆ ಅನ್ನೋ ಗಂಭೀರ ಆರೋಪವನ್ನು ಚಿತ್ತಾಪುರ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮಾಡಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಹುದ್ದೆಗಳನ್ನು ಮಾರಾಟ ಮಾಡಲಾಗುತ್ತಿದೆ. ಯುವತಿಯ ಕೆಲಸ ಕೊಡಿಸಲು ಸಚಿವರೊಬ್ಬರು ಮಂಚ ಹತ್ತಲು ಹೇಳಿದ್ದರು. ಹಗರಣ ಬೆಳಕಿಗೆ ಬಂದ ಬಳಿಕ ಅವರು ರಾಜೀನಾಮೆ ನೀಡಿದ್ದೆ ನನ್ನ ಮಾತಿಗೆ ಸಾಕ್ಷಿ ಎಂದರು.
ಕೆಪಿಟಿಸಿಎಲ್ ನ ವಿವಿಧ ಹುದ್ದೆಗಳ 1,492 ಸ್ಥಾನಗಳಿಗೆ ನೇಮಕಾತಿ ನಡೆದಿದೆ. ಇದರಲ್ಲಿ 600 ಹುದ್ದೆಗಳಿಗೆ ಡೀಲ್ ನಡೆದಿರುವ ಸಾಧ್ಯತೆಯಿದೆ. ಎಇ ಹುದ್ದೆಗೆ 50 ಲಕ್ಷ, ಜೆಇ ಹುದ್ದೆಗೆ 30 ಲಕ್ಷದವರೆಗೂ ಹಣ ಪಡೆದಿರುವ ಶಂಕೆ ಇದೆ. ಪ್ರತಿಯೊದು ಪರೀಕ್ಷೆಯಲ್ಲಿ ಅಕ್ರಮ ನಡೆದರೆ ಬಡ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು ಎಂದು ವಾಗ್ದಾಳಿ ನಡೆಸಿದರು.