ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಧ್ಯ ಚರ್ಚೆಯಲ್ಲಿರುವುದು ಕಾಂಗ್ರೆಸ್ ಎಂಎಲ್ಸಿ ಬಿ.ಕೆ ಹರಿಪ್ರಸಾದ್ ನಡೆಸುತ್ತಿರುವ ವಾಗ್ದಾಳಿಗಳು. ಒಂದು ಕಡೆ ವಿಪಕ್ಷ ನಾಯಕರು ಸರ್ಕಾರದ ವಿರುದ್ಧ ಮುಗಿಬೀಳುತ್ತಿದ್ದರೆ, ಮತ್ತೊಂದು ಕಡೆ ಬಿ.ಕೆ ಹರಿಪ್ರಸಾದ್ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದರಿಂದಾಗಿ ಕೈ ಸರ್ಕಾರಕ್ಕೆ ಟೆನ್ಷನ್ ಶುರುವಾಗಿದೆ.
ಸಚಿವ ಸ್ಥಾನ ಸಿಗದ ಅಸಮಾಧಾನಕ್ಕೆ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಕೆಲ ದಿನಗಳ ಹಿಂದೆ ಶಾಸಕ ಬಸವರಾಜ್ ರಾಯರೆಡ್ಡಿ ಸಹ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು. ಅವರ ಮಾತು ಸ್ವಲ್ಪ ಮೆದುವಾಗಿತ್ತು. ಆದರೆ ಬಿ.ಕೆ ಹರಿಪ್ರಸಾದ್ ಕಟು ಟೀಕೆಗಳನ್ನು ಮಾಡಿದ್ದಾರೆ. ಫಲಿತಾಂಶ ಬಂದ ಬಳಿಕವೂ ಸಿದ್ದರಾಮಯ್ಯ ಪರ, ಅವರ ವೈಚಾರಿಕ ನಿಲುವು ಪರ ನಿಂತು ಮಾತನಾಡುತ್ತಿದ್ದ ಹರಿಪ್ರಸಾದ್ ಈಗ ವೈಲೆಂಟ್ ಆಗಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ಹೆಸರು ಹೇಳದೆ ಆಡುತ್ತಿರುವ ಮಾತುಗಳ ಕುರಿತು ಹೈಕಮಾಂಡ್ ಅಂಗಳಕ್ಕೆ ಹೋಗಿದೆ. ಬಹಿರಂಗವಾಗಿ ಯಾವುದೇ ರೀತಿಯ ಹೇಳಿಕೆ ನೀಡಬೇಡಿ ಎಂದು ಸೂಚಿಸಲಾಗಿದೆ. ಆದರೆ, ಈಗಾಗ್ಲೇ ಪಕ್ಷ ಹಾಗೂ ಸಿಎಂಗೆ ಡ್ಯಾಮೇಜ್ ಆಗುವ ರೀತಿಯಲ್ಲಿ ಮಾತನಾಡಿದ್ದು, ವಿರೋಧ ಪಕ್ಷಗಳು ಇದನ್ನು ಬಂಡವಾಳ ಮಾಡಿಕೊಳ್ಳುತ್ತಿವೆ. ಲೋಕಸಭಾ ಚುನಾವಣೆ ತಯಾರಿಯಲ್ಲಿರುವ ಹೊತ್ತಿನಲ್ಲಿ ಈ ರೀತಿಯ ಮಾತುಗಳು ಒಂದಿಷ್ಟು ಪೆಟ್ಟು ಬೀಳುವುದು ಸಹಜ. ಗ್ಯಾರೆಂಟಿ ಅಲೆಯಲ್ಲಿ ಜನರನ್ನು ಸೆಳೆದು ಎಂಪಿ ಎಲೆಕ್ಷನ್ ನಲ್ಲಿ ಕಮಾಲ್ ಮಾಡಬೇಕು ಎನ್ನುತ್ತಿರುವ ಕೈ ನಾಯಕರಿಗೆ ಇದು ಸಮಸ್ಯೆ ಸೃಷ್ಟಿಸುತ್ತಿರುವುದು ಮಾತ್ರ ಸತ್ಯ.