ಪ್ರಜಾಸ್ತ್ರ ಸುದ್ದಿ
ಸಿಂದಗಿ: ಕಾಂಗ್ರೆಸ್ ಯುವ ನಾಯಕ, ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಸಂದರ್ಭದಲ್ಲಿ, ಅಸ್ಸಾಂನಲ್ಲಿ ನಡೆದ ಘಟನೆ ಖಂಡಿಸಿ ಸಿಂದಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಪಕ್ಷದ ಕಚೇರಿ ಎದುರು ಶಾಸಕ ಅಶೋಕ ಮನಗೂಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಶಾಸಕ ಮನಗೂಳಿ, ಯಾತ್ರೆಯ ವೇಳೆ ಬಸ್ಸಿನ ಮೇಲೆ ನಡೆದ ದಾಳಿ, ದೇವಸ್ಥಾನ ಭೇಟಿಯ ವೇಳೆ ಅವರನ್ನು ಬಿಡದೆ ಇರುವುದನ್ನು ನಾವು ಖಂಡಿಸುತ್ತೇವೆ. ಭಾರತ ಭವ್ಯ ಪರಂಪರೆ, ಇತಿಹಾಸ ಹೊಂದಿದೆ. ಇಲ್ಲಿ ಬಾಳಿ ಬದುಕುತ್ತಿರುವ ಪ್ರತಿಯೊಬ್ಬರು ಹಿಂದೂಗಳು. ಬಿಜೆಪಿಯಲ್ಲಿನ ಪದಾಧಿಕಾರಿಗಳು, ಕಾರ್ಯಕರ್ತರು ರಾಮ, ಸೀತೆ, ಲಕ್ಷ್ಮಣನನ್ನು ಖರೀದಿಸಿದಂತೆ ವರ್ತನೆ ಮಾಡುತ್ತಿದ್ದಾರೆ. ರಾಮ ನಿಮಗೆ ಎಷ್ಟು ಬೇಕಾಗಿದ್ದಾನೆ ಅಷ್ಟೇ ನಮಗೂ ಬೇಕು ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ತಿಳಿಸಿದ್ದಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಎಲ್ಲರೂ ನಾರಾರು ವರ್ಷಗಳಿಂದ ಬಾಳಿ ಬದುಕುತ್ತಿದ್ದೇವೆ. ಚುನಾವಣೆ ಗೆಲ್ಲಬೇಕು ಎನ್ನುವ ಒಂದೇ ಉದ್ದೇಶದಿಂದ ಧರ್ಮಗಳ ನಡುವೆ ಬಿಜೆಪಿಯವರು ವಿಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಅಂತಾ ವಾಗ್ದಾಳಿ ನಡೆಸಿದರು.
ಈ ವೇಳೆ ಮಹಿಳಾ ಘಟಕದ ತಾಲೂಕಾಧ್ಯಕ್ಷೆ ಜಯಶ್ರೀ ಹದನೂರ, ಜ್ಯೋತಿ ಗುಡಿಮನಿ, ಅಂಬಿಕಾ ಪಾಟೀಲ, ಶಾರದಾ ಬೆಟಗೇರಿ, ವರ್ಷಾ ಪಾಟೀಲ, ಸುರೇಶ ಚೌದ್ರಿ, ಹಾಸೀಂ ಆಳಂದ, ನಾಸೀರ ದೇವರಮನಿ, ರಾಮು ಮನ್ಸೂರ, ಮಹ್ಮದ ಪಟೇಲ, ರಜತ್ ತಾಂಬೆ, ಯಂಕನಗೌಡ, ಸಂತೋಷ ಬಿರಾದಾರ, ಖಲೀಲ ದಾದಾಪೀರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.