ಅಥಣಿ: ಕರೋನಾ ಅನ್ನೋದು ಬರೀ ಆರೋಗ್ಯದ ಮೇಲಿನ ಸಮಸ್ಯೆಯಾಗಿಲ್ಲ. ಸಾವು ಬದುಕಿನ ನುಡುವಿನ ಹೋರಾಟದ ಜೊತೆಗೆ ಜೀವನ ಸಾಗಿಸಬೇಕಾದ ನಿರಂತರ ಹೋರಾಟವಾಗಿದೆ. ಹೀಗಾಗಿ ತುತ್ತು ಅನ್ನಕ್ಕೂ ಪರದಾಡುವ ಜನತೆಗೆ ಮಾನವೀಯತೆ ತೋರಿಸುವ ಮನಸ್ಸುಗಳು ದುಡಿಯುತ್ತಿವೆ. ಅದರಲ್ಲಿ ಅಥಣಿ ಪೊಲೀಸ್ ಠಾಣೆಯ ಹೋಮ್ ಗಾರ್ಡ್ಸ್ ಸಹ ಇದ್ದಾರೆ.
ತಮ್ಮ ದುಡಿಮೆಯ ಆಧಾಯದಲ್ಲಿ ಹಣ ಹೊಂದಿಸಿ 2 ಕ್ವಿಂಟಾಲ್ ಅಕ್ಕಿ, 40 ಲೀಟರ್ ಅಡುಗೆ ಎಣ್ಣೆ, 40 ಕೆಜಿ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನ ಪೂರೈಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸುಮಾರು 30ಕ್ಕೂ ಹೆಚ್ಚು ವೇಷಗಾರ ಕುಟುಂಬಗಳು ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ವಾಸವಾಗಿದ್ದು, ಅವರಿಗೆ ಅಗತ್ಯ ವಸ್ತುಗಳನ್ನ ನೀಡಿದ್ದಾರೆ.
ವೇಷ ಹಾಕಿಕೊಂಡು ಹೊಟ್ಟೆ ತುಂಬಿಸಿಕೊಳ್ಳುವ ಇವರಿಗೆ ಬದುಕು ಬಲು ಬಾರವಾಗಿದೆ. ಮೊದಲೆ ಅಲೆದಾಟದ ಬದುಕು. ಇದೀಗ ಅದಕ್ಕೂ ಕಲ್ಲು ಬಿದ್ದಿದೆ. ಇಂಥಾ ಕುಟುಂಬಗಳಿಗೆ ಉಪಕಾರ ಮಾಡಿದ್ದು ನಿಜಕ್ಕೂ ಸಾರ್ಥಕಭಾವ. ವೇಷಗಾರ ಕುಟುಂಬದ ಸದಸ್ಯರು ನಿತ್ಯ ವೇಷ ಧರಿಸುವ ಮೂಲಕ ತಮ್ಮ ಉಪಜೀವನ ನಡೆಸುತ್ತಿದ್ದು, ಅವರ ಸಂಕಷ್ಟಕ್ಕೆ ಸ್ಪಂದಿಸುವ ಸಣ್ಣ ಕೆಲಸ ನಾವು ಮಾಡಿದ್ದೇವೆ ಎಂದು ಅಥಣಿ ಹೋಮ್ ಗಾರ್ಡ್ ಯುನಿಟ್ ಆಫಿಸರ್ ರವಿ ಕೊಳಿ ಹೇಳಿದರು.
ಅಥಣಿ ಸಿಪಿಐ ಶಂಕರಗೌಡ ಪಾಟೀಲ ಅವರು ಹಾವುಗಾರ ಕುಟುಂಬಕ್ಕೆ ದಿನಸಿ ವಸ್ತುಗಳನ್ನ ವಿತರಿಸಿದರು. ಈ ವೇಳೆ ಹೋಮ್ ಗಾರ್ಡ್ ಸಿಬ್ಬಂದಿ ಪ್ರವೀಣ ಕಾಂಬಳೆ, ಮುತ್ತು ನಾಯಕ, ಸಂಜು ಕೋರೆ, ತಾನಾಜಿ ಕಾಂಬಳೆ, ಅನೀಲ ಡವಳೆಶ್ವರ, ಸುಭಾಸ ದೊಡ್ಡವಾಡ ಸೇರಿದಂತೆ ಇತರರು ಉಪಸ್ಥಿತರಿದ್ದರು.