ಪ್ರಜಾಸ್ತ್ರ ಸುದ್ದಿ
ನವದೆಹಲಿ: ದೇಶದ ತುಂಬಾ ಜಾತಿ ಗಣತಿ ನಡೆಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ಬೆಂಬಲಿಸಿದೆ. ಇದೊಂದು ಐತಿಹಾಸಿಕ ನಿರ್ಧಾರವೆಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಸೋಮವಾರ ದೆಹಲಿಯಲ್ಲಿ ವಿವಿಧ ರಾಜ್ಯಗಳ ಕಾಂಗ್ರೆಸ್ ಮುಖ್ಯಮಂತ್ರಿಗಳು, ರಾಷ್ಟ್ರೀಯ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಜಾತಿ ಗಣತಿ ಮಾಡಲು ಪ್ರಧಾನಿ ಅಸಮರ್ಥರು. ನಮ್ಮ ನಾಲ್ಕು ಮುಖ್ಯಮಂತ್ರಿಗಳಲ್ಲಿ ಮೂವರು ಹಿಂದುಳಿದ ವರ್ಗದವರು. ಬಿಜೆಪಿಯ 10 ಮುಖ್ಯಮಂತ್ರಿಗಳಲ್ಲಿ ಒಬ್ಬರು ಮಾತ್ರ ಹಿಂದುಳಿದವರು. ಪ್ರಧಾನಿ ಹಿಂದುಳಿದವರ ಪರ ಕೆಲಸ ಮಾಡುವುದಿಲ್ಲ. ಮುಖ್ಯ ವಿಷಯಗಳಿಂದ ಅವರನ್ನು ವಿಮುಖಗೊಳಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿ, ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಶಿಸ್ತು, ಸಂಯಮ, ಸಮನ್ವಯದಿಂದ ಕೆಲಸ ಮಾಡಲು ಕರೆ ಕೊಟ್ಟರು. ಎಸ್ಸಿ, ಎಸ್ಟಿ, ಒಬಿಸಿ ಜನಸಂಖ್ಯೆಗೆ ಅನುಗುಣವಾಗಿ ಸಾಮಾಜಿಕ ನ್ಯಾಯ ಹಾಗೂ ಹಕ್ಕುಗಳ ಸಲುವಾಗಿ ದೇಶದ ತುಂಬಾ ಜಾತಿ ಗಣತಿಯಾಗಬೇಕು ಎಂದು ಆಗ್ರಹಿಸಿದರು. ಈ ವೇಳೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿ ಇತರರು ಹಾಜರಿದ್ದರು.