ಸಿಂದಗಿ: ಇದು ಹೆಸರಿಗೆ ಮಾತ್ರ ಜಿಲ್ಲೆಯಲ್ಲಿಯೇ ದೊಡ್ಡ ತಾಲೂಕು. ಆದ್ರೆ, ಇಲ್ಲಿ ಮೂಲಭೂತ ಸೌಕರ್ಯಗಳು ಅನ್ನೋದು ಮರಿಚಿಕೆಯಾಗಿವೆ. ತಗ್ಗುಗಳಿಂದ ಕೂಡಿರುವ ರಸ್ತೆ, ಎಲ್ಲಿ ನೋಡಿದ್ರೂ ಗಬ್ಬು ನಾರುತ್ತಿರುವ ಕಸದ ರಾಶಿ. ಬೀದಿ ದೀಪಗಳು ಯಾವಾಗ ಹತ್ತುತ್ತವೆ ಯಾವಾಗ ಹತ್ತುವುದಿಲ್ಲ ಒಂದೂ ಗೊತ್ತಾಗುವುದಿಲ್ಲ. ಇದರ ನಡುವೆ ಹಲವು ದಿನಗಳಿಂದ ದನಗಳ ಹಾವಳಿ ಹೆಚ್ಚಾಗಿದೆ.
ಬೀಡಾಡಿ ದನಗಳ ಅಡ್ಡ
ಕಾಲೇಜ್ ರೋಡ್, ವಿವೇಕಾನಂದ ಸರ್ಕಲ್
ತಹಶೀಲ್ದಾರ್ ಕಚೇರಿ ಮುಂಭಾಗ
ವಿಜಯಪುರ ರೋಡ್, ಬಸ್ ನಿಲ್ದಾಣ ಮುಂಭಾಗ
ಕಾಯಿಪಲ್ಲೆ ಮಾರುಕಟ್ಟೆ
ಪಟ್ಟಣದ ತುಂಬಾ ಗುಂಪು ಗುಂಪಾಗಿ ನೂರಾರು ರಾಸುಗಳು ಓಡಾಡುತ್ತಿವೆ. ರೋಡ್ ಮಧ್ಯದಲ್ಲಿಯೇ ಮಲಗುತ್ತವೆ. ಅಂಗಡಿಗಳ ಮುಂದೆ, ತಹಶೀಲ್ದಾರ್ ಕಚೇರಿ ಸುತ್ತಮುತ್ತ, ವಿಜಯಪುರ ರೋಡ್, ಕಾಲೇಜ್ ರೋಡ್, ವಿವೇಕಾನಂದ ಸರ್ಕಲ್ ಸೇರಿದಂತೆ ಎಲ್ಲೆಂದರಲ್ಲಿ ರಸ್ತೆಗೆ ಅಡ್ಡಲಾಗಿ ನಿಲ್ಲುತ್ತಿವೆ.
ಊರು ತುಂಬಾ ದನಗಳು ಓಡಾಡ್ತಿವೆ. ರಸ್ತೆಯಲ್ಲಿ ಹೋಗುವಾಗ ಹಾಯಲು ಬರುತ್ತವೆ. ಮಕ್ಕಳಿಗೆ, ವಯಸ್ಸಾದವರಿಗೆ ಅಂಜಿಕೆ ಬರ್ತಿದೆ. ತಂತಮ್ಮ ದನಗಳನ್ನ ತಮ್ಮ ಮನೆಯಲ್ಲಿ ಕಟ್ಟಿಕೊಂಡು ಸಾಕಲಿ. ಗಾಡಿಗಳ ಸೌಂಡ್ ಗೆ ಬೆದರಿ ರಸ್ತೆ ಮಧ್ಯೆ ಓಡಾಡಿದಾಗ ಏನಾದ್ರೂ ಆದ್ರ ಏನ್ ಗತಿ. ಈ ಬಗ್ಗೆ ಎಷ್ಟು ಹೇಳಿದ್ರೂ ಯಾರು ಕೇಳ್ತಿಲ್ಲ.
ಶೇಖರಗೌಡ ಹರನಾಳ, ಸ್ಥಳೀಯರು
ಸ್ಥಳೀಯರಿಗೆ ಸೇರಿದ ದನಕರುಗಳನ್ನು ಹೀಗೆ ಪಟ್ಟಣದಲ್ಲಿ ಓಡಾಡಲು ಬಿಟ್ಟಿರುವುದ್ರಿಂದ ವಾಹನ ಸವಾರರಿಗೆ, ಸಾರ್ವಜನಿಕ ವಾಹನಗಳಿಗೆ, ಶಾಲಾ ಮಕ್ಕಳಿಗೆ, ಹಿರಿಯ ನಾಗರೀಕರಿಗೆ ಸಾಕಷ್ಟು ತೊಂದ್ರೆಯಾಗ್ತಿದೆ. ಇದ್ರಿಂದಾಗಿ ಅಪಘಾತಗಳು ಸಂಭವಿಸ್ತಿವೆ. ಅಂಗಡಿಗಳ ಮುಂದೆ ಮಲಗುವುದ್ರಿಂದ ವ್ಯಾಪಾರಕ್ಕೆ ಸಮಸ್ಯೆಯಾಗ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಕಣ್ಣಿದ್ದೂ ಕುರುಡಾಗಿರುವುದು ದುರಂತ.
ರೋಡನಾಗ ದನಗಳು ಭಾಳ್ ಓಡಾಡ್ತವ್ರಿ. ಗಾಡಿ ಹೋಗಕ್ಕ ಜಾಗ ಇರ್ಲಲ್ಲರಿ. ರೋಡ್ ನಡಬರಕ ಮಲಗ್ತಾವ್ರಿ. ಸ್ವಂತದ್ದು ದನಗಳು ಇದ್ರ ಮನ್ಯಾಗ ಕಟ್ಟಬೇಕ್ರಿ. ಹಿಂಗ್ ಬಿಟ್ರ, ನಾಳೆ ಏನಾರ ಹೆಚ್ಚು ಕಮ್ಮಿಯಾದ್ರ ಏನ್ ಮಾಡ್ತಾರಿ. ಮುನಿಸಿಪಾಟಿ ಇದ್ದು ಇಲ್ಲಂದಂಗೈತ್ರಿ.
ಸಿದ್ದಪ್ಪ ಬಂದಾಳ, ಸ್ಥಳೀಯರು
ದನಕರುಗಳ ಹಾವಳಿಯಿಂದ ಅನೇಕ ಕಡೆ ಅಮಾಯಕ ಜೀವಗಳು ಬಲಿಯಾಗಿವೆ. ಗುಂಪು ಗುಂಪಾಗಿರುವುದ್ರಿಂದ ಯಾವ ಟೈಂನಲ್ಲಿ ಅವುಗಳ ವರ್ತನೆ ಹೇಗೆ ಇರುತ್ತೆ ಅನ್ನೋದು ಗೊತ್ತಿರುವುದಿಲ್ಲ. ಹೀಗಾಗಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮಗಳನ್ನ ಕೈಗೊಳ್ಳಬೇಕು. ಇಲ್ದೇ ಹೋದ್ರೆ ನಾಳೆ ಏನಾದ್ರೂ ಅನಾಹುತವಾದ್ರೆ ಯಾರನ್ನ ಹೊಣೆ ಮಾಡಲಾಗುತ್ತೆ ಅನ್ನೋ ಪ್ರಶ್ನೆಯನ್ನ ಸಾರ್ವಜನಿಕರು ಕೇಳ್ತಿದ್ದಾರೆ.