ಪ್ರಜಾಸ್ತ್ರ ಸುದ್ದಿ
ದೇವರಹಿಪ್ಪರಗಿ: ವಿಜಯಪುರ ಜಿಲ್ಲೆಯ ನೂತನ ತಾಲೂಕು ದೇವರಹಿಪ್ಪರಗಿ ತಾಲೂಕು ಪಂಚಾಯ್ತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. ಈ ಮೂಲಕ ನೂತನ ತಾಲೂಕು ಪಂಚಾಯ್ತಿಯನ್ನ ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಹಿಟ್ನಳ್ಳಿ ಕ್ಷೇತ್ರದ ಲಲಿತಾಬಾಯಿ ದೊಡ್ಡಮನಿ ಹಾಗೂ ಮಣೂರ ಕ್ಷೇತ್ರದ ಗಂಗೂಬಾಯಿ ಪವಾರ ಅವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಮೀಸಲಾತಿ ಇದ್ದ ಕಾರಣಕ್ಕೆ ಗೆಲುವು ದಾಖಲಿಸಿದ್ರು. ಬಿಜೆಪಿಯ ಏಕೈಕ ಅಭ್ಯರ್ಥಿ ಕೆರಟುಗಿ ಕ್ಷೇತ್ರದ ಹನುಮಂತಿ ಸಂದಿಮನಿ, ಪಕ್ಷದಿಂದ ಬೆಂಬಲ ಸಿಗದೆ ನಾಮಪತ್ರ ವಾಪಸ್ ಪಡೆದುಕೊಂಡರು.
ನೂತನ ತಾಲೂಕು ಪಂಚಾಯ್ತಿಗೆ ಸಿಂದಗಿ ತಾಲೂಕಿನ 8 ಸದಸ್ಯರು ಹಾಗೂ ಬಸವನಬಾಗೇವಾಡಿ 1 ಸದಸ್ಯ ಸೇರಿ 9 ಜನ ಸದಸ್ಯರಿದ್ರು. ಇದರಲ್ಲಿ ಕಾಂಗ್ರೆಸ್ 6, ಬಿಜೆಪಿ 1 ಹಾಗೂ ಪಕ್ಷೇತರರು 2 ಇದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಜಾತಿ ಮಹಿಳೆ ಹಾಗೂ ಅನುಸೂಚಿತ ಜಾತಿ ಇರುವ ಕಾರಣಕ್ಕೆ ಕಾಂಗ್ರೆಸ್ ಇಬ್ಬರು ಪಕ್ಷೇತರರಿಗೆ ಬೆಂಬಲ ನೀಡಿತು.
ಕಾಂಗ್ರೆಸ್ ಬೆಂಬಲದಿಂದ ಗೆದ್ದ ಲಲಿತಾಬಾಯಿ ದೊಡ್ಡಮನಿ ಹಾಗೂ ಗಂಗೂಬಾಯಿ ಪವಾರ ಕಾಂಗ್ರೆಸ್ ಪಕ್ಷದೊಂದಿಗೆ ಸೇರಿಕೊಂಡರು. ಕಾಂಗ್ರೆಸ್ ಕಾರ್ಯಕರ್ತರು ಗೆಲುವನ್ನ ಸಂಭ್ರಮಿಸಿದ್ರು. ಈ ವೇಳೆ ಕಾಂಗ್ರೆಸ್ ನಾಯಕ ಸುಭಾಶ ಚಾಯಾಗೋಳ, ಮಹಾಂತೇಶ ಮೂರ್ಕನಾಳ, ರಾಜಶ್ರೀ ಗಣಜಲಿ, ಮಲ್ಲನಗೌಡ ಬಿರಾದಾರ, ದಾವಲಮಲಿಕ ಖಾಜಿ, ಮಹಾದೇವಿ ಗೋಲಗೇರಿ, ನಜೀರಅಹ್ಮದ್ ಪಾನಪರೋಶಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳು ಹಾಜರಿದ್ರು.