ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸ್ಯಾಂಡಲ್ ವುಡ್ ಅಂಗಳದಲ್ಲಿ ಡ್ರಗ್ಸ್ ದಂಧೆ ಸಂಬಂಧ ಈಗಾಗ್ಲೇ ನಟಿ ರಾಗಿಣಿ, ಸಂಜನಾ, ಡ್ರಗ್ಸ್ ಪೆಡ್ಲರ್ ಗಳಾದ ರಾಹುಲ, ರವಿಶಂಕರ ಸೇರಿದಂತೆ ಅನೇಕರನ್ನ ಬಂಧಿಸಲಾಗಿದೆ. ಈ ದಂಧೆಯ ಪ್ರಮುಖ ಆರೋಪಿ ಶೇಕ್ ಫಾಝಿಲ್ ಜೊತೆ ಅನೇಕ ನಟ, ನಟಿಯರು ನಂಟು ಹೊಂದಿದ್ರು ಎನ್ನಲಾಗ್ತಿದೆ. ಈ ಸಂಬಂಧ ಸ್ಟಾರ್ ದಂಪತಿ ನಟ ದಿಗಂತ ಹಾಗೂ ನಟಿ ಐಂದ್ರಿತಾಗೆ ಸಿಸಿಬಿ ನೋಟಿಸ್ ನೀಡಿದೆ.
ಆದ್ರೆ, ಇದುವರೆಗೂ ಈ ಪ್ರಕರಣ ಸಂಬಂಧಿಸಿದಂತೆ ಚರ್ಚೆಗೆ ಬರ್ತಿರುವ ಯಾವೊಬ್ಬ ರಾಜಕಾರಣಿಗೂ ನೋಟಿಸ್ ನೀಡಿಲ್ಲ. ಶೇಕ್ ಫಾಝಿಲ್ ಸೇರಿದಂತೆ ಡ್ರಗ್ಸ್ ಪೆಡ್ಲರ್ ಗಳ ಜೊತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಆರ್.ಅಶೋಕ, ಶಾಸಕ ಜಮೀರ ಅಹ್ಮದ ಅವರ ಫೋಟೋಗಳು ವೈರಲ್ ಆಗಿವೆ. ಇವರಿಗೂ ನೋಟಿಸ್ ನೀಡಲಾಗುತ್ತಾ?
ಇನ್ನು ಈ ಬಗ್ಗೆ ಹಲವರ ವಿರುದ್ಧ ಗಂಭೀರ ಆರೋಪ ಮಾಡಿರುವ ರಿಯಲ್ ಎಸ್ಟೇಟ್ ಉದ್ಯಮಿ, ಪ್ರಶಾಂತ ಸಂಬರಗಿ ಸಹ ಡ್ರಗ್ಸ್ ಪೆಡ್ಲರ್ ರಾಹುಲ ಜೊತೆ ಇರುವ ಫೋಟೋ ವೈರಲ್ ಆಗಿದೆ. ನಿರ್ಮಾಪಕ ಕೆ.ಮಂಜು, ಸಂಗೀತ ನಿರ್ದೇಶಕ ಗುರು ಕಿರಣ ಅವರ ಫೋಟೋ ಸಹ ವೈರಲ್ ಆಗಿದೆ. ಇವರಿಗೂ ಸಿಸಿಬಿ ನೋಟಿಸ್ ನೀಡುತ್ತಾ? ಅಥವ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಅನ್ನೋ ಮಾತಿನಂತೆ ಆರಕ್ಕೆ ಏರದ ಮೂರಕ್ಕೆ ಇಳಿಯದ ನಟ, ನಟಿಯರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದು, ವಶಕ್ಕೆ ಪಡೆದು ಬಿಡಲಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.
ಡ್ರಗ್ಸ್ ಪ್ರಕರಣ ಕಳೆದ ಸುಮಾರ 15 ದಿನಗಳಿಂದಲೂ ನಡೆಯುತ್ತಿದೆ. ರಾಗಿಣಿ, ಸಂಜನಾ ಸುತ್ತಲೆ ಸುತ್ತುತ್ತಿದೆ. ಇದೀಗ ದಿಗಂತ, ಐಂದ್ರಿತಾ ಹೆಸರು ಸೇರಿಕೊಂಡಿತು. ಇವರು ಶೇಕ್ ಫಾಝಿಲ್ ಜೊತೆ ಇರುವ ಫೋಟೋ ವೈರಲ್ ಆಗಿದೆ ಅನ್ನೋ ಕಾರಣಕ್ಕೆ. ಆದ್ರೆ, ಶಾಸಕ ಜಮೀರ ಅಹ್ಮದ್, ಆರ್.ಅಶೋಕ, ಸಿದ್ದರಾಮಯ್ಯ, ಕೆ.ಮಂಜು ಸೇರಿದಂತೆ ಅನೇಕರು ಡ್ರಗ್ಸ್ ಪೆಡ್ಲರ್ ಗಳ ಜೊತೆ ಇರುವ ಫೋಟೋಗಳು ವೈರಲ್ ಆಗಿವೆ. ಇವರಿಗೂ ನೋಟಿಸ್ ನೀಡಿ ಅವರಿಗೂ ಇವರಿಗೂ ಇರುವ ನಂಟಿನ ಬಗ್ಗೆ ವಿಚಾರಣೆ ನಡೆಸಲಾಗುತ್ತಾ ಅನ್ನೋದಕ್ಕೆ ಉತ್ತರ ಸಿಗಬೇಕಿದೆ.