ಪ್ರಜಾಸ್ತ್ರ ಸುದ್ದಿ
ಮುಂಬೈ: ದೇಶದಲ್ಲಿ ಸಾಕಷ್ಟು ಸುದ್ದಿಯಾಗಿದ್ದ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಜಾಮೀನು ನೀಡಲಾಗಿದೆ. 25 ದಿನಗಳ ನಂತರ ಆರ್ಯನ್ ಖಾನ್ ಹಾಗೂ ಇತರೆ ಇಬ್ಬರಿಗೆ ಜಾಮೀನು ಸಿಕ್ಕಿದೆ.
ಎರಡು ದಿನಗಳ ಕಾಲ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಆರೋಪಿಗಳಾದ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ ಅನ್ನೋ ಮೂವರಿಗೆ ಜಾಮೀನು ನೀಡಿದೆ. ನಾಳೆ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.
ಆರೋಪಿಗಳ ಪರವಾಗಿ ಮುಕುಲ್ ರೋಹಟಗಿ, ಅಮಿತ್ ದೇಸಾಯಿ, ಅಲಿ ಕಾಶಿಫ್ ಖಾನ್ ದೇಶಮುಖ್ ವಾದ ಮಂಡಿಸಿದರು. ಎನ್ ಸಿಬಿ ಪರವಾಗಿ ಎಎಸ್ ಜಿ ಅನಿಲ್ ಸಿಂಗ್ ವಾದ ಮಾಡಿದರು. ಹೋಟೆಲ್ ನ ಕೊಠಡಿಯೊಂದರಲ್ಲಿ ಧೂಮಪಾನ ಮಾಡುತ್ತಿದ್ದರೆ ಹೋಟೆಲ್ ನವರೆಲ್ಲರೂ ಪಿತೂರಿ ಮಾಡುತ್ತಿದ್ದರೆ ಅನ್ನೋ ಅರ್ಥವೇ ಎಂದು ಕೇಳಿದರು. ಆರ್ಯನ್ ಖಾನ್ ಚಿಕ್ಕವನು. ಜೈಲಿನ ಬದಲಿಗೆ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಬೇಕಿತ್ತು. ಅಲ್ದೇ, ಬಂಧನಕ್ಕೆ ಸೂಕ್ತ ಕಾರಣ ನೀಡದೆ ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಮುಕುಲ್ ರೋಹಟಗಿ ವಾದ ಮಂಡಿಸಿದರು.