ಪ್ರಜಾಸ್ತ್ರ ಸುದ್ದಿ
ಧಾರವಾಡ: ಹಾನಗಲ್ ಹಾಗೂ ಸಿಂದಗಿ ಉಪ ಚುನಾವಣೆ ಹೊಸ್ತಿಲಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಪ್ತ ಎಂದೇ ಹೇಳಲಾಗುವ ನಗರದ ಪ್ರಥಮ ದರ್ಜೆ ಗುತ್ತಿಗೆದಾರ ಯು.ಬಿ.ಶೆಟ್ಟಿಯವರ ಮನೆಯ ಮೇಲೆ ಗುರುವಾರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಲ್ಲಿನ ದಾಸನಕೊಪ್ಪ ಸರ್ಕಲ್ ಬಳಿಯಿರುವ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯಲ್ಲಿನ ದಾಖಲೆ ಮತ್ತು ಬೆಲೆಬಾಳುವ ವಸ್ತುಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮನೆಯಲ್ಲಿ ಯು.ಬಿ.ಶೆಟ್ಟಿ ಮತ್ತು ಕುಟುಂಬದವರಿಂದ ಹೇಳಿಕೆಗಳನ್ನು ಇಬ್ಬರು ಸಾಕ್ಷಿದಾರರ ಎದುರು ಅಧಿಕಾರಿಗಳು ಪಡೆಯುತ್ತಿದ್ದಾರೆ.
ಇನ್ನು ವಿನಾಯಕ ನಗರದಲ್ಲಿರುವ ಯು.ಬಿ.ಶೆಟ್ಟಿ ಸೋದರ ಸಂತೋಷ ಶೆಟ್ಟಿಯವರ ನಿವಾಸದಲ್ಲಿ ಸಹ ದಾಖಲೆ ಪರಿಶೀಲನೆ ನಡೆದಿದೆ ಎನ್ನಲಾಗಿದೆ. ಮೂಲತಃ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಯು.ಬಿ ಶೆಟ್ಟಿ ಡಿಕೆಶಿ ಆಪ್ತರಾಗಿದ್ದು, ಪ್ರಚಾರಕ್ಕೆ ಬಂದಿದ್ದ ಸಂದರ್ಭದಲ್ಲಿ ಇವರ ಜತೆ ಇದ್ದರೆನ್ನಲಾದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ಗೋವಾದಿಂದ ಬಂದಿರುವ ಐಟಿ ಅಧಿಕಾರಿಗಳ ತಂಡವು ಅಗತ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೇ ಕಾಂಗ್ರೆಸ್ ಮುಖಂಡರು ಅಲ್ಲದೇ ಶಿವಕುಮಾರ ಆಪ್ತರಾದ ರಾಬರ್ಟ್ ದದ್ದಾಪುರಿ ಮತ್ತು ಆನಂದ ಜಾಧವರಿಗೂ ಬುಲಾವ್ ನೀಡಿ ವಿಚಾರಣೆಗೆ ಕರೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.