ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಈ ಕರೋನಾ ಹಾವಳಿ ಅನ್ನೋದು ಇರದೆ ಹೋಗಿದ್ರೆ ಇಷ್ಟೊತ್ತಿಗಾಗ್ಲೇ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ ಪ್ರಕ್ರಿಯೆ ಜೋರಾಗಿರುತಿತ್ತು. ಆದ್ರೆ, ಕೋವಿಡ್ 19 ಎಲ್ಲವನ್ನೂ ಬಂದ್ ಮಾಡಿದೆ. ಲಾಕ್ ಡೌನ್ ಸಡಿಲಿಕೆಯಿಂದ ಬಹುತೇಕ ಕೆಲಸ ಕಾರ್ಯಗಳು ನಡೆದಿವೆ. ಅದೇ ರೀತಿ ಶಿಕ್ಷಣ ಸಂಸ್ಥೆಗಳನ್ನ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಶಾಲಾ, ಕಾಲೇಜುಗಳನ್ನ ಆರಂಭಿಸುವ ಕುರಿತು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನ ಇಟ್ಟಿದೆ. ಜುಲೈ ನಂತರ ಶಾಲಾ-ಕಾಲೇಜು, ಕೋಚಿಂಗ್ ಸೆಂಟರ್ ಶುರು ಮಾಡುವುದಕ್ಕೂ ಮೊದ್ಲು ಪೋಷಕರ ಅಭಿಪ್ರಾಯ ಪಡೆಯಲು ನಿರ್ಧರಿಸಲಾಗಿದೆ.
ರಾಜ್ಯದಲ್ಲಿ ಹಂತ ಹಂತವಾಗಿ ಶಿಕ್ಷಣ ಸಂಸ್ಥೆಗಳನ್ನ ಶುರು ಮಾಡುವ ಸಂಬಂಧ ಪೋಷಕರು ಹಾಗೂ ಇದಕ್ಕೆ ಸಂಬಂಧಿಸಿದವರ ಜೊತೆ ಶಾಲಾ ಮಟ್ಟದಲ್ಲಿಯೇ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಹೀಗಾಗಿ ಜೂನ್ 10 ರಿಂದ 12 ರ ಅವಧಿಯಲ್ಲಿ, ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ, ಹಿರಿಯ, ಪ್ರೌಢ ಶಾಲೆಗಳನ್ನ ಪ್ರಾರಂಭಿಸುವ ವಿಚಾರಕ್ಕೆ ಮುಖ್ಯೋಪಾಧ್ಯಾಯರು ಪೋಷಕರು ಹಾಗೂ ಎಸ್ ಡಿಎಂಸಿ ಸದಸ್ಯರ ಜೊತೆ ಸಭೆ ನಡೆಸಲು ಸೂಚಿಸಲಾಗಿದೆ.
ಈ ಸಂಬಂಧ ಸಭೆಗೆ ಪೋಷಕರು, ಎಸ್ ಡಿಎಂಸಿ ಸದಸ್ಯರು ಭಾಗವಹಿಸುವ ಮೂಲಕ ತಮ್ಮ ಅಭಿಪ್ರಾಯಗಳನ್ನ ತಿಳಿಸಲು ಶಿಕ್ಷಣ ಸಚಿವ ಸುರೇಶಕುಮಾರ ತಿಳಿಸಿದ್ದಾರೆ.