ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಗುಬ್ಬೇವಾಡ, ಕಣ್ಣಗುಡ್ಡಾಳ, ಬಸ್ತಿಯಾಳ, ಹಡಗಿನಾಳ ಸೇರಿ ಸುತ್ತಮುತ್ತ ಗ್ರಾಮಗಳಲ್ಲಿ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲವೆಂದು ಹೇಳಿ ಈ ಭಾಗದ ರೈತರು, ಕೆಇಬಿ ಕಚೇರಿ ಎದುರು ಗುರುವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದರು.
ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ ಜೊತೆಗೆ ಓಲ್ಟೇಜ್ ಸಹ ಹೆಚ್ಚಿಗೆ ಇರುವುದಿಲ್ಲ. ಇದರಿಂದಾಗಿ ಬೆಳೆಗಳಿಗೆ ನೀರಿಲ್ಲದೆ ಎಲ್ಲವೂ ಒಣಗಿ ಹೋರಟಿವೆ. ಈ ಸಂಬಂಧ ಕೆಇಬಿ ಸಿಬ್ಬಂದಿ ಗಮನಕ್ಕೆ ತಂದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಕಳೆದ ಹದಿನೈದು ದಿನಗಳಿಂದ ಅಲೆದಾಟ ನಡೆಸಿದರೂ ಯಾರೂ ಪ್ರಯೋಜನವಾಗಿಲ್ಲ. ಹೀಗಾಗಿ ಪ್ರತಿಭಟನೆ ನಡೆಸಿದ್ದೇವೆ ಎಂದು ಹೇಳಿದರು.
ಸುಮಾರು ಎರಡ್ಮೂರು ಗಂಟೆಗಳ ಕಾಲ ಕೆಇಬಿ ಎಇಇ ಸಿ.ಡಿ ನಾಯಕ ಅವರೊಂದಿಗೆ ವಾಗ್ವಾದ ನಡೆಸಿದರು. ತಮ್ಮ ಸಮಸ್ಯೆಗೆ ಪರಿಹಾರ ಸಿಗುವ ತನಕ ಇಲ್ಲಿಂದ ಹೋಗುವುದಿಲ್ಲವೆಂದು ಹಠ ಹಿಡಿದರು. ರೈತರ ಮನವೊಲಿಸಿದ ಅಧಿಕಾರಿ ಎರಡ್ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದ ಮೇಲೆ ರೈತರ ಧರಣಿ ಕೈ ಬಿಟ್ಟರು.
ಈ ವೇಳೆ ಬಾಪುಗೌಡ ಪಾಟೀಲ, ಶೇಖರ ವಾಲಿ, ಅಹ್ಮದಪಟೇಲ ಬಿರಾದಾರ, ಹಣಮಂತ ಪೂಜಾರಿ, ಶಿವು ನಾಟೀಕಾರ, ಮಾರುತಿ ಭಜಂತ್ರಿ, ಮಡಿವಾಳಪ್ಪ ಮಳ್ಳಿ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.