ಪ್ರಜಾಸ್ತ್ರ ಸುದ್ದಿ
ಸಿಂದಗಿ: ಕಳೆದೊಂದು ವಾರದಿಂದ ಸರಿಯಾಗಿ ವಿದ್ಯುತ್ ಪೂರೈಕೆ ಮಾಡಿಲ್ಲವೆಂದು ತಾಲೂಕಿನ ಬ್ಯಾಕೋಡ, ಬನಹಟ್ಟಿ, ಬೋರಗಿ ಗ್ರಾಮದ ಜನರು ಪಟ್ಟಣದ ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಪಟ್ಟಣದ ವಿವೇಕಾನಂದ ಸರ್ಕಲ್ ನಿಂದ ಕೆಇಬಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕೆಇಬಿ ಕಚೇರಿಗೆ ಬಂದ ನೂರಾರು ರೈತರು ಒಳಗೆ ನುಗ್ಗಲು ನೋಡಿದರು. ಈ ವೇಳೆ ಅವರನ್ನು ಪೊಲೀಸರು ತಡೆದರು. ಹೀಗಾಗಿ ಕೆಲ ಪೊಲೀಸರೊಂದಿಗೆ ವಾಗ್ವಾದ ನಡೆಯಿತು. 6 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಕೊಡುತ್ತೇವೆ ಎಂದು ಹೇಳಿದವರು 1 ಗಂಟೆ ಸಹ ಕೊಡುತ್ತಿಲ್ಲ. ಇದರಿಂದಾಗಿ ಬೆಳೆಯಲ್ಲ ಒಣಗುತ್ತಿವೆ. ಇದೆ ರೀತಿಯಾದರೆ ನಾವು ಜೀವನ ಮಾಡೋದು ಹೇಗೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸ್ಥಳಕ್ಕೆ ಬಂದ ತಹಶೀಲ್ದಾರ್ ಸಂಜೀವಕುಮಾರ ದಾಸರ, ಕೆಇಬಿಯ ಎಡಬ್ಲು, ರೈತರೊಂದಿಗೆ ಮಾತನಾಡಿ ಸಂಜೆಯೊಳಗೆ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು. ಅಧಿಕಾರಿಗಳ ಮಾತಿಗೆ ರೈತರು ಒಪ್ಪಿಕೊಂಡಿದ್ದು, ಒಂದು ವೇಳೆ ಸಮಸ್ಯೆ ಬಗೆಹರಿಯದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ನಾನಾಗೌಡ ಬಿರಾದಾರ, ಐನಗೌಡ ಮೂಲಿಮನಿ, ಶಂಕರಗೌಡ ಪಾಟೀಲ, ಸೋಮನಗೌಡ ಪಾಟೀಲ, ಲಚ್ಚಪ್ಪ ಬನಹಟ್ಟಿ, ವಿಶ್ವನಾಥರೆಡ್ಡಿ ಬ್ಯಾಕೋಡ, ಆನಂದ ಹರನಾಳ ಸೇರಿದಂತೆ ನೂರಾರು ಜನ ರೈತರು ಭಾಗವಹಿಸಿದ್ದರು.