ಪ್ರಜಾಸ್ತ್ರ ಸಿನಿಮಾ ಡೆಸ್ಕ್
ತಮ್ಮಿಂದ ಹಣ ಪಡೆದು ಸಿನಿಮಾ ಮಾಡಲು ಡೇಟ್ ನೀಡುತ್ತಿಲ್ಲವೆಂದು ಆರೋಪಿಸಿದ ನಿರ್ಮಾಪಕ, ವಿತರಕ ಎಂ.ಎನ್ ಕುಮಾರ್ ವಿರುದ್ಧ ನಟ ಸುದೀಪ್ ಕಾನೂನು ಹೋರಾಟ ನಡೆಸಿದ್ದು, ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದ್ದಾರೆ. ಅಲ್ಲದೆ 10 ಕೋಟಿ ರೂಪಾಯಿ ಪರಿಹಾರ ಕೇಳಿದ್ದಾರೆ.
ಸುದೀಪ್ ಪರ ವಕೀಲರು ನಿರ್ಮಾಪಕರಿಗೆ ನೋಟಿಸ್ ನೀಡಿದ್ದಾರೆ. ಸುಳ್ಳಿನ ಕತೆ ಕಟ್ಟಿ ನನ್ನ ತೇಜೋವಧೆ ಮಾಡಿದ್ದೀರಿ. ನೀವು ಮಾಡಿರುವ ಎಲ್ಲ ಆರೋಪಗಳನ್ನು ಸಾಬೀತು ಪಡಿಸಿ ಇಲ್ಲದಿದ್ದರೆ 10 ಕೋಟಿ ರೂಪಾಯಿ ಮಾನನಷ್ಟ ಪರಿಹಾರ ನೀಡಬೇಕೆಂದು ಹೇಳಿದ್ದಾರೆ. ಜೊತೆಗೆ ಎಲ್ಲ ರೀತಿಯ ಮಾಧ್ಯಮಗಳ ಮೂಲಕ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಅಂತಾ ತಿಳಿಸಿದ್ದಾರೆ.
ಇತ್ತೀಚೆಗೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ನಿರ್ಮಾಪಕ ಎಂ.ಎನ್ ಕುಮಾರ್ ಅವರು, ಸುದೀಪ್ ಅವರು ಸಿನಿಮಾ ಮಾಡಿಕೊಡುವುದಾಗಿ ಹೇಳಿ ನನ್ನಿಂದ ಹಣ ಪಡೆದಿದ್ದಾರೆ. ಆದರೆ, ಸಿನಿಮಾ ಮಾಡಿಕೊಡುತ್ತಿಲ್ಲ. ನಮ್ಮ ಕೈಗೂ ಸಿಗುತ್ತಿಲ್ಲ. ಮುತ್ತತ್ತಿ ಸತ್ಯರಾಜು ಅಂತಾ ಟೈಟಲ್ ಸಹ ರಿಜಿಸ್ಟರ್ ಮಾಡಿಸಲಾಗಿದೆ. ನಿರ್ದೇಶಕ ನಂದ ಕಿಶೋರ್ ಅವರಿಂದ ಕಥೆ ಮಾಡಿಸಿ ಅಂತಾ ಹೇಳಿದ್ದರು. ಅಲ್ಲಿಂದ ತಮ್ಮಿಂದ ಕೆಲವರಿಗೆ ಹಣ ಕೊಡಿಸಿದ್ದಾರೆ ಅಂತಾನೂ ಆರೋಪಿಸಿದರು. ಈ ಸಂಬಂಧ ನಟ ಸುದೀಪ್ ಇದೀಗ ಕಾನೂನು ಮೂಲಕ ನೋಟಿಸ್ ನೀಡಿದ್ದಾರೆ.