ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಿರ್ಮಾಪಕ, ವಿತರಕ ಎಂ.ಎನ್ ಕುಮಾರ್ ವಿರುದ್ಧ ನಟ ಸುದೀಪ್ ತಮ್ಮ ಕಾನೂನು ಸಮರ ಮುಂದುವರೆಸಿದ್ದಾರೆ. ನಟರಾದ ರವಿಚಂದ್ರನ್ ಹಾಗೂ ಶಿವರಾಜಕುಮಾರ್ ಪ್ರವೇಶದಿಂದ ಪ್ರಕರಣ ಸುಖಾಂತ್ಯ ಕಾಣುತ್ತೆ ಎನ್ನಲಾಗಿತ್ತು. ಆದರೆ, ನಟ ಸುದೀಪ್, ಗುರುವಾರ ಕೋರ್ಟಿಗೆ ಹಾಜರಾಗಿ ತಮ್ಮ ವಿರುದ್ಧದ ಆರೋಪಗಳ ಕುರಿತು ಹೇಳಿಕೆ ದಾಖಲಿಸಿದ್ದಾರೆ.
ವಕೀಲರಾದ ಅಜಯ್ ಕಡಕೋಳ್ ಅವರೊಂದಿಗೆ ಕೋರ್ಟಿಗೆ ಹಾಜರಾದ ಸುದೀಪ್, ಸುಮಾರು ಒಂದು ಗಂಟೆಗಳ ಕಾಲ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ತಮ್ಮ ಮೇಲಿನ ಆರೋಪಗಳಿಗೆ ಸಾಕ್ಷಿ ನೀಡುವಂತೆ ಕೋರಿದ್ದಾರೆ. ಇಂದು ನಾನು ಸುಮ್ಮನಾದರೆ ನಾಳೆ ಮತ್ತೊಬ್ಬರ ಮಾಧ್ಯಮಗಳ ಮುಂದೆ ಬಂದು ಆರೋಪ ಮಾಡುತ್ತಾರೆ. ಹೀಗಾಗಿ ಈ ಕಾನೂನು ಹೋರಾಟ ಎಂದಿದ್ದಾರೆ.
ಸುದೀಪ್ ಹಾಗೂ ಎಂ.ಎನ್ ಕುಮಾರ್ ನಡುವೆ ಮೊದಲು ಒಳ್ಳೆಯ ಸಂಬಂಧವಿತ್ತು. ಆದರೆ, ಅದು ಯಾವಾಗ ಹಾಳಾಗಿದೆ ಅನ್ನೋದು ಗೊತ್ತಿಲ್ಲ. ತಮಗೆ ಸಿನಿಮಾ ಮಾಡಿಕೊಡುವುದಾಗಿ ಹೇಳಿ ಹಣ ಪಡೆದು ಇದುವರೆಗೂ ಸಿನಿಮಾ ಮಾಡಿಕೊಟ್ಟಿಲ್ಲ ಅನ್ನೋದು ಎಂ.ಎನ್ ಕುಮಾರ್ ಆರೋಪ. ಜೊತೆಗೆ ಬೇರೆಯವರಿಗೂ ತಮ್ಮಿಂದ ಹಣ ಕೊಡಿಸಿದ್ದಾರೆ ಅಂತಾನೂ ಆರೋಪಿಸಿದ್ದಾರೆ. ಹೀಗಾಗಿ ಇದು ಚಲನಚಿತ್ರ ವಾಣಿಜ್ಯ ಮಂಡಳಿ, ನಟ ರವಿಚಂದ್ರನ್, ಶಿವರಾಜಕುಮಾರ್ ಅವರ ತನಕ ಹೋಗಿದ್ದು, ಸಂಧಾನ ಯಶಸ್ವಿಯಾಗಿಲ್ಲ ಅನ್ನೋದಕ್ಕೆ ಇವತ್ತಿನ ಸುದೀಪ್ ನಡೆ ಸಾಕ್ಷಿ.