ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸೂಪರ್ ಸ್ಟಾರ್ ರಜನಿಕಾಂತ್ ಮುಖ್ಯಭೂಮಿಕೆಯಲ್ಲಿರುವ ಜೈಲರ್ ಸಿನಿಮಾ ಇಂದು ರಿಲೀಸ್ ಆಗಿದೆ. ಇದಕ್ಕಾಗಿ ಕನ್ನಡದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದ ಕೌಶಲ್ಯ ಸುಪ್ರಜಾ ರಾಮಾ ಸಿನಿಮಾಗೆ ಬೆಂಗಳೂರಿನಲ್ಲಿ ಥಿಯೇಟರ್ ನಿಂದ ಕೊಕ್ ಕೊಡಲಾಗಿದೆ. ಇದೀಗ ನೋಡಿದರೆ ಜೈಲರ್ ಸಿನಿಮಾ ಎಲ್ಲರ ನಿರೀಕ್ಷೆ ಹುಸಿ ಮಾಡಿದೆ ಎಂದು ಹೇಳಲಾಗುತ್ತಿದೆ.
ನಿರ್ದೇಶಕ ನೆಲ್ಸನ್, ನಟ ರಜನಿಕಾಂತ್ ಸ್ಟಾರ್ ಗಿರಿಯನ್ನು ಮತ್ತಷ್ಟು ವಿಜೃಂಭಿಸಲು ಹೋಗಿ ಕಥೆಯಲ್ಲಿ ಸೋತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಮೊದಲ ಬಾರಿಗೆ ರಜನಿಯೊಂದಿಗೆ ಸ್ಕ್ರೀನ್ ಶೇರ್ ಮಾಡಿರುವ ಸ್ಯಾಂಡಲ್ ವುಡ್ ಶಿವಣ್ಣ ಸಿಕ್ಕ ಅವಕಾಶದಲ್ಲಿ ಮೆಚ್ಚುಗೆ ಪಡೆದಿದ್ದಾರೆ. ಹಿಂದಿಯ ಜಾಕಿ ಶ್ರಾಫ್, ಮಲಯಾಳಂನ ಮೋಹನ್ ಲಾಲ್ ಅವರ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳದೆ ಹೋಗಲಾಗಿದೆ ಅನ್ನೋದು ಚಿತ್ರ ನೋಡಿದವರ ಅಭಿಪ್ರಾಯ.
ರಜನಿ ಪತ್ನಿಯಾಗಿ ಕಾಣಿಸಿಕೊಂಡಿರುವ ನಟಿ ರಮ್ಯಾಕೃಷ್ಣ, ತಮನ್ನಾ ಭಾಟಿಯಾ ಆಟಕ್ಕುಂಟು ಲೆಕ್ಕಕ್ಕಿಲ್ಲದ ಸ್ಥಿತಿಯಂತೆ. ಮಗನ ಸಾವಿನ ಸೇಡಿನ ಕಥೆಯನ್ನು ಹೇಳಲು ಹೋದ ನಿರ್ದೇಶಕ ನೆಲ್ಸನ್, ಕಥೆಗೆ ಹೆಚ್ಚು ಒತ್ತು ನೋಡದೆ ಸೂಪರ್ ಸ್ಟಾರ್ ನಟನ ಇಮೇಜ್ ಗೆ ಮ್ಯಾಚ್ ಮಾಡಲು ಹೋಗಿ ಅನೇಕ ದೃಶ್ಯಗಳು ಬಾಲಿಶವೆನಿಸುತ್ತವೆ ಎಂದು ಸಿನಿ ರಸಿಕರು ಹೇಳುತ್ತಿದ್ದಾರೆ.