ಸಿಂದಗಿ: ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ ತೋಟದ ಮೇಲೆ ಅಬಕಾರಿ ಪೊಲೀಸರು ದಾಳಿ ಮಾಡಿ ಬರೋಬ್ಬರಿ 103 ಕೆಜಿ ಒಣ ಹಾಗೂ 13 ಹಸಿ ಗಾಂಜಾ ಗಿಡವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 26 ಲಕ್ಷವೆಂದು ತಿಳಿದು ಬಂದಿದೆ.
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬೊಮ್ಮನಳ್ಳಿ ರಸ್ತೆ ಹತ್ತಿರದ ತೋಟದ ಮನೆಯಲ್ಲಿ ಜಪ್ತಿ ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ, ದತ್ತಾತ್ರೇಯ ಯಾತನೂರ ಹಾಗೂ ರಾಜೇಂದ್ರ ವಾಲೀಕಾರ ಎಂಬುವರ ತೋಟದಲ್ಲಿ ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗಿದೆ. ದತ್ತಾತ್ರೇಯ ಯಾತನೂರ ಹಾಗೂ ಹಣಮಂತರಾಯನನ್ನು ಬಂಧಿಸಲಾಗಿದೆ. ರಾಜೇಂದ್ರ ವಾಲೀಕಾರ ಪರಾರಿಯಾಗಿದ್ದಾನೆ.
ಅಬಕಾರಿ ಉಪ ಆಯುಕ್ತ ಎ. ರವಿಶಂಕರ ಮಾರ್ಗದರ್ಶನದಲ್ಲಿ ಅಬಕಾರಿ ಪೊಲೀಸ್ ಎ.ಎ. ಮುಜಾವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಇದರಲ್ಲಿ ಸಿಂದಗಿ ವಲಯ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ರು. ವಿಜಯಪುರ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.