ಚೆನ್ನೈ: ಬೆಂಗಳೂರಿನಿಂದ ಹೊರಟಿದ್ದ ಕೇರಳದ ಸರ್ಕಾರಿ ಬಸ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 15ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಘಟನೆ ನಡೆದಿದೆ. ಇಂದು ಬೆಳ್ಳಂಬೆಳಗ್ಗೆ ನಡೆದ ಘಟನೆಯಲ್ಲಿ ಬಸ್ ನಲ್ಲಿ ನಿದ್ದೆಗೆ ಜಾರಿದ್ದ 15ಕ್ಕೂ ಹೆಚ್ಚು ಪ್ರಯಾಣಿಕರು ಚಿರನಿದ್ರೆಗೆ ಜಾರಿದ್ದಾರೆ.
ಕೇರಳ ಸರ್ಕಾರದ ವೋಲೋ ಬಸ್ ಹಾಗೂ ಟ್ರಕ್ ನಡುವೆ ಕೊಯಮ್ಮತ್ತೂರ್ ಸಲೇಂ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಇಂದು ಬೆಳಗ್ಗೆ ಸುಮಾರು 4.30ರ ಟೈಂನಲ್ಲಿ ಅಪಘಾತ ಸಂಭವಿಸಿದೆ. ಬಸ್ ನಲ್ಲಿ 48 ಜನ ಪ್ರಯಾಣಿಕರಿದ್ದು, ಡ್ರೈವರ್ ಹಾಗೂ ಕಂಡಕ್ಟರ್ ಸೇರಿದಂತೆ 20 ಜನರು ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿರುವವರಲ್ಲಿ ಐವರು ಮಹಿಳೆಯರು ಸೇರಿದ್ದಾರೆ. ಮೃತ ದೇಹಗಳನ್ನ ತಿರುಪರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಮೂವರ ಗುರುತು ಪತ್ತೆಯಾಗಿದೆ. ಶಿವರಾತ್ರಿ ಹಬ್ಬದ ಸಮಯದಲ್ಲಿ ನಡೆದ ಈ ದುರ್ಘಟನೆಯಿಂದ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.