ಪ್ರಜಾಸ್ತ್ರ ವಿಶೇಷ ಸುದ್ದಿ
ಸಿಂದಗಿ: ಪಟ್ಟಣದ ವಿದ್ಯಾನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 4, ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ. ಸುಂದರವಾದ ಚಿತ್ರಗಳಿಂದ ಕಣ್ಮನ ಸೆಳೆಯುತ್ತಿದೆ. ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಕಾಣಿಸುತ್ತದೆ. ಇದರಿಂದಾಗಿ ಇಲ್ಲಿನ ವಿದ್ಯಾರ್ಥಿಗಳಿಗೂ ಖುಷಿಯಾಗಿದೆ.
ಬೆಂಗಳೂರಿನ ಕ್ಯಾಂಪಸ್ ಟು ಕಮ್ಯೂನಿಟಿ ಅನ್ನೋ ಸಂಸ್ಥೆಯ ಯುವಕರ ತಂಡ, ವಿಜಯಪುರದ ಬಿಎಲ್ ಡಿಇಯ ಆರಿಟಿಟೆಕ್ಚರ್ ಕಾಲೇಜಿನ ಎನ್ ಎಸ್ಎಸ್ ಘಟಕದ ಸಹಯೋಗದೊಂದಿಗೆ ಅದ್ಭುತವಾದ ಚಿತ್ರಗಳನ್ನು ರಚಿಸಿದೆ. ಶಾಲೆಯ ಹೊರಗೆ ಹಾಗೂ ಒಳಗೆ ಸುಮಾರು 40 ಯುವಕರ ತಂಡ ಚಿತ್ರಗಳನ್ನು ಬಿಡಿಸಿದೆ. ಇದರಿಂದಾಗಿ ಶಾಲೆ ಕಂಗೊಳಿಸುತ್ತಿದೆ.
ಇಲ್ಲಿ 1 ರಿಂದ 7ನೇ ತರಗತಿವರೆಗೂ 230ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 8 ಜನ ಶಿಕ್ಷಕರಿದ್ದಾರೆ. 4 ಜನ ಶಿಕ್ಷೇತರ ಸಿಬ್ಬಂದಿ ಇದ್ದಾರೆ. ಆದರೆ, ಇಷ್ಟೊಂದು ಚೆಂದವಾಗಿ ಕಾಣಿಸುತ್ತಿರುವ ಶಾಲೆಯಲ್ಲಿ ಇರೋ 5 ಕೊಠಡಿಗಳಲ್ಲಿ 4 ಕೊಠಡಿಗಳ ಮೇಲ್ಛಾವಣಿ ಹಾಳಾಗಿ ಹೋಗಿವೆ. ಕೆಲವು ವಿದ್ಯಾರ್ಥಿಗಳು ಹೊರಗೆ ಕುಳಿತು ಪಾಠ ಕೇಳುತ್ತವೆ. ಕಿಟಕಿ, ಬಾಗಿಲು ಮುರಿದಿವೆ. ಮಳೆ ಬಂದರೆ ಶಾಲೆಗೆ ರಜೆ ನೀಡಬೇಕಾದ ಪರಿಸ್ಥಿತಿ ಇಲ್ಲಿದೆ ಅಂತಾರೆ ಮುಖ್ಯಗುರುಗಳಾದ ಆರ್.ಎಸ್ ಸಿಂದಗಿ ಅವರು.
ತಾಲೂಕಿನ ಯಾವೆಲ್ಲ ಶಾಲೆಗಳ ದುರಸ್ತಿ ಕೆಲಸವಿದೆ ಅನ್ನೋದರ ಬಗ್ಗೆ ಮೇಲಾಧಿಕಾರಿಗಳಿಗೆ ಪಟ್ಟಿ ಕಳುಹಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಈ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ.
ಎಚ್.ಎಂ ಹರನಾಳ, ಬಿಇಓ, ಸಿಂದಗಿ
ಇನ್ನು ನೀರಿನ ಸಮಸ್ಯೆಯೂ ಇದ್ದು, ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳಲಾಗುತ್ತಿದೆ. ಮಧ್ಯಾಹ್ನ ಬಿಸಿ ಊಟಕ್ಕೆ ಬೇಕಾದ ನೀರು, ಮಕ್ಕಳಿಗೆ ಕುಡಿಯಲು ನೀರಿನ ಸಮಸ್ಯೆಯಿದೆ. ಶಾಲಾ ಆವರಣದಲ್ಲಿ ಬೋರ್ ಇದ್ದು, ಅದಕ್ಕೊಂದು ಕೈಪಂಪ್ ರೀತಿ ವ್ಯವಸ್ಥೆ ಮಾಡಿ ಕೊಟ್ಟರೆ ಇದೊಂದು ಮಾದರಿ ಶಾಲೆಯಾಗುತ್ತೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಾರೆ. ಇದರಿಂದಾಗಿ ಬಡ ಮಕ್ಕಳಿಗೂ ಒಳ್ಳೆಯ ಶಾಲೆ, ಶಿಕ್ಷಣ ನೀಡಿದಂತಾಗುತ್ತೆ ಅಂತಾರೆ.