ಪ್ರಜಾಸ್ತ್ರ ಅಪರಾಧ ಸುದ್ದಿ
ಹಾಸನ: ಅನಾದಿ ಕಾಲದಿಂದಲೂ ತಿಳಿದವರು ಒಂದು ಮಾತು ಹೇಳಿದ್ದಾರೆ, ಹೆಣ್ಣು, ಹೊನ್ನು, ಮಣ್ಣಿನ ಹಿಂದೆ ಹೋಗಬಾರದು ಎಂದು. ಆದ್ರೆ, ಈ ಮೂರರ ಮೋಹ ಬಿಟ್ಟು ಬದುಕಿದವರು ತುಂಬಾ ಕಡಿಮೆ. ಹೀಗಾಗಿ ಕೆಲವೊಮ್ಮೆ ಇಂಥಾ ಘಟನೆಗಳು ನಡೆಯುತ್ತವೆ ನೋಡಿ.
ಕಳೆದ ಆಗಸ್ಟ್ 27ರ ರಾತ್ರಿ ಬೇಡಿಗನಹಳ್ಳಿ ಹಾಗೂ ಜಿ ಹೊಸೂರು ಗ್ರಾಮದ ನಡುವಿನ ಕೆರೆಯ ದಿಬ್ಬದ ಮೇಲೆ ಪುನೀತ ಅನ್ನೋ ಯುವಕನಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ 6 ಜನರನ್ನ ಬಂಧಿಸಲಾಗಿದ್ದು, ಭಯಾನಕ ಸತ್ಯ ಹೊರ ಬಂದಿದೆ. ತಂದೆ ನೀಡಿದ್ದ ಸುಪಾರಿಯಿಂದಲೇ ಪುನೀತ ಹತ್ಯೆಯಾಗಿದ್ದಾನೆ.
ಪುನೀತ ತಂದೆ ಹೇಮಂತ ಹಾಗೂ ತಾಯಿ ಕಳೆದ 3 ವರ್ಷಗಳಿಂದ ಬೇರೆ ಇದ್ದರು. ಆದ್ರೆ, ತಾಯಿಗೆ ಜೀವನಾಂಶ ಕೊಡದೆ ಇರುವುದು ಹಾಗೂ ಪರಸ್ತ್ರೀಯೊಂದಿಗೆ ತಂದೆಗೆ ಸಂಬಂಧ ಇರುವ ಬಗ್ಗೆ ಪುನೀತಗೆ ಸಿಟ್ಟಿತ್ತು. ಇನ್ನು ಹೇಮಂತ 2ನೇ ಮಗನ ಜೊತೆ ಜಿ.ಹೊಸೂರಿನಲ್ಲಿ ವಾಸವಾಗಿದ್ದ. ಇತ್ತ ಪುನೀತ ಲಾಕ್ ಡೌನ್ ನಿಂದಾಗಿ ಬೆಂಗಳೂರಿನಿಂದ ವಾಸಪ್ ಊರಿಗೆ ಬಂದಿದ್ದ. ಜಮೀನಿನಲ್ಲಿನ ತೆಂಗಿನ ಕಾಯಿಗಳನ್ನು 2 ಬಾರಿ ಮಾರಾಟ ಮಾಡಿದ್ದ. ಇದ್ರಿಂದ ಹೇಮಂತ ಆಕ್ರೋಶಗೊಂಡಿದ್ದ. ಹೀಗಾಗಿ 2 ಲಕ್ಷ ರೂಪಾಯಿಗೆ ಮಗನ ಹತ್ಯೆಗೆ ಸುಪಾರಿ ನೀಡಿದ್ದ. ಅದರಂತೆ ಆಗಸ್ಟ್ 27ರಂದು ಪುನೀತ ಕೊಲೆಯಾಗಿದೆ.
ಇದೀಗ ಪುನೀತ ತಂದೆ ಹೇಮಂತ, ಕಿರಿಯ ಸಹೋದರ ಪ್ರಶಾಂತ, ಸುನೀಲ, ಕಾಂತರಾಜು, ನಂದೇಶ, ನಾಗರಾಜ ಎಂಬುವವರನ್ನ ಬಂಧಿಸಲಾಗಿದೆ.