ಪ್ರಜಾಸ್ತ್ರ ಸುದ್ದಿ
ಹಾವೇರಿ: ಹಾವೇರಿಯ ರೈಲ್ವೆ ನಿಲ್ದಾಣಕ್ಕೆ ಮೈಲಾರ ಮಹಾದೇವಪ್ಪನವರ ಹೆಸರಿಡಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ‘ಮಹಾದೇವಪ್ಪ ಮೈಲಾರ ರೈಲ್ವೆ ನಿಲ್ದಾಣ’ ಎಂದು ನಾಮಕರಣ ಮಾಡಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಸೂಚಿಸಿದೆ.
ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಆದೇಶ ಹೊರಡಿಸಿದ್ದು, ಪ್ರಾದೇಶಿಕ ಭಾಷೆಯ ಜೊತೆಗೆ ಹಿಂದಿ, ಇಂಗ್ಲಿಷ್ ಭಾಷೆಯಲ್ಲಿಯೂ ಹೆಸರು ಬರೆಯಲು ಸೂಚಿಸಲಾಗಿದೆ. 1911ರಲ್ಲಿ ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನಲ್ಲಿ ಜನಿಸಿದ ಮೈಲಾರ ಮಹಾದೇವಪ್ಪನವರು, 16ನೇ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ರು. 1930ರಲ್ಲಿ ಗಾಂಧಿ ನೇತೃತ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಕರ್ನಾಟಕದಿಂದ ಭಾಗವಹಿಸಿದ್ದ ಏಕೈಕ ಪ್ರತಿನಿಧಿಯಾಗಿದ್ರು.
ಅಂದಿನ ಬ್ರಿಟಿಷ್ ಸರ್ಕಾರ ಮೈಲಾರ ಮಹಾದೇವಪ್ಪನವರನ್ನ ಹಿಡಿದು ಕೊಟ್ಟರೆ 300 ರೂಪಾಯಿ ಬಹುಮಾನ ಕೊಡುವುದಾಗಿ 1942ರಲ್ಲಿ ಘೋಷಣೆ ಮಾಡಿತ್ತು. ಅಷ್ಟರ ಮಟ್ಟಿಗೆ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ರು. ಇದೀಗ ಅವರ ಹೆಸರನ್ನ ರೈಲು ನಿಲ್ದಾಣಕ್ಕೆ ನಾಮಕರಣ ಮಾಡ್ತಿರುವುದು ಖುಷಿಯ ಸಂಗತಿಯಾಗಿದೆ.