ಪ್ರಜಾಸ್ತ್ರ ಸುದ್ದಿ
ವಿಜಯಪುರ: ಸೋಮವಾರ ಇಡೀ ದಿನ ಜಿಲ್ಲೆಯಾದ್ಯಂತ ಮಳೆಯಾಗಿದೆ. ಮುಂಜಾನೆಯಿಂದ ಶುರುವಾದ ಮಳೆ ಇಡೀ ದಿನ ಬಿಟ್ಟು ಬಿಡದೆ ಸುರಿದಿದೆ. ಇದರಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಿಜಯಪುರ ನಗರ ಸೇರಿದಂತೆ ಬಸವನಬಾಗೇವಾಡಿ, ತಿಕೋಟಾ, ಮುದ್ದೇಬಿಹಾಳ, ದೇವರಹಿಪ್ಪರಗಿ, ಸಿಂದಗಿ, ಇಂಡಿ ಸೇರಿದಂತೆ ಎಲ್ಲೆಡೆ ಮಳೆಯಾಗಿದೆ.
ಇಂದು ಶ್ರಾವಣ ಕಡೆ ಸೋಮವಾರ ಆಗಿರುವುದರಿಂದ ಜನರು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಬೇಕು ಎಂದುಕೊಂಡಿದ್ದರು. ಆದರೆ, ಎಡಬಿಡದೆ ಸುರಿದ ಮಳೆಯಿಂದಾಗಿ ಬಹುತೇಕರು ಹೊರಗೆ ಬಂದಿಲ್ಲ. ಕೆಲಸ ಕಾರ್ಯದ ನಿಮಿತ್ತ ಅನಿವಾರ್ಯ ಕಾರಣಗಳಿಗೆ ಹೊರಗೆ ಬರಬೇಕಾದವರು, ತರಕಾರಿ, ಹಣ್ಣು ಸೇರಿದಂತೆ ಸಣ್ಣಪುಟ್ಟ ವ್ಯಾಪಾರಿಗಳು ಮಳೆಯಲ್ಲಿಯೇ ವ್ಯಾಪಾರ ಮಾಡಿದ್ದಾರೆ.
ಸಂಜೆಯಾದರೂ ಮಳೆ ಬಿಡದೆ ಇರುವುದರಿಂದ ಕೆಲಸಕ್ಕೆ ಹೋದವರು ಮನೆಗೆ ಬರುವುದಕ್ಕೆ ಸಾಕಷ್ಟು ಪರದಾಟ ನಡೆಸಿದ್ದಾರೆ. ಕೆಲವು ಕಡೆ ಶಾಲಾ, ಕಾಲೇಜುಗಳಿಗೆ ಮಧ್ಯಾಹ್ನವೇ ರಜೆ ಘೋಷಿಸಲಾಗಿದೆ. ಹೀಗಾಗಿ ವಿಜಯಪುರ ಜಿಲ್ಲೆ ಒಂದು ರೀತಿಯಿಂದ ಮಲೆನಾಡಿನ ಅನುಭವ ನೀಡಿದೆ.