ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಮನ್ನಾಪುರ ಯಂಕಂಚಿ ಹತ್ತಿರ ಇರುವ ಕಾಲುವೆಯಲ್ಲಿ ಕಳೆದ 3 ದಿನಗಳ ಹಿಂದೆ ಬಿದ್ದ ಬಾಲಕನ ಮೃತದೇಹ ಇದುವರೆಗೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. 8ನೇ ತರಗತಿ ಓದುತ್ತಿದ್ದ ರಾಘವೇಂದ್ರ ಶಿವಪ್ಪ ಕೊಲ್ಕಾರ(15) ಅನ್ನೋ ವಿದ್ಯಾರ್ಥಿ ಸ್ನೇಹಿತರೊಂದಿಗೆ ಕಾಲುವೆಗೆ ಈಜಲು ಹೋದಾಗ ಈ ಘಟನೆ ನಡೆದಿದೆ.
ತಾಳಿಕೋಟೆಯಲ್ಲಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಮನ್ನಾಪುರಕ್ಕೆ ಪರೀಕ್ಷೆ ಬರೆಯಲು ಗುರುವಾರ ಬಂದಿದ್ದಾನೆ. ಪರೀಕ್ಷೆ ಬರೆದ ಬಳಿಕ ನಾಲ್ವರು ಸ್ನೇಹಿತರು ಕಾಲುವೆಗೆ ಈಜಲು ಬಂದಿದ್ದಾರೆ. ಈ ವೇಳೆ ನೀರಿನ ಸೆಳವು ಹೆಚ್ಚಾಗಿ ಇಬ್ಬರು ಬಾಲಕರು ಅಪಾಯಕ್ಕೆ ಸಿಲುಕಿದ್ದಾರೆ. ಒಬ್ಬನನ್ನು ರಕ್ಷಿಸಲಾಗಿದೆ. ಆದರೆ, ಬಾಲಕ ರಾಘವೇಂದ್ರನನ್ನು ಕಾಪಾಡಲು ಆಗಲಿಲ್ಲ.
ಬಾಲಕನ ತಂದೆ ಮೃತಪಟ್ಟಿದ್ದು, ತಾಯಿ ಮಂಜುಳಾ ತಹಶೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 3 ದಿನಗಳಿಂದ ಮಗನ ಸುಳಿವು ಸಿಗದೆ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಬಾಲಕನ ಪತ್ತೆ ಕಾರ್ಯದಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ. ನೀರಿನ ಮಟ್ಟ ಕಡಿಮೆಯಾಗಲಿ ಎಂದು ಹೇಳುತ್ತಲೇ ಇದ್ದಾರೆ ಎಂದು ಬಾಲಕನ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಕುರಿತು ತಹಶೀಲ್ದಾರ್ ನಿಂಗಣ್ಣ ಬಿರಾದಾರ ಅವರೊಂದಿಗೆ ಪ್ರಜಾಸ್ತ್ರ ವೆಬ್ ಪತ್ರಿಕೆ ಅವರು ಮಾತನಾಡಿದಾಗ, ಸ್ಥಳಕ್ಕೆ ನಾನು ಎರಡು ಬಾರಿ ಭೇಟಿ ಕೊಟ್ಟಿದ್ದೇನೆ. ಬಾಲಕನ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ, ಸುಮಾರು 85 ಕಿಲೋ ಮೀಟರ್ ದೂರದಿಂದ ನೀರು ಹರಿದು ಬರುವುದರಿಂದ ಅದು ಕಡಿಮೆ ಮಾಡಲು ಕಾಲುವೆಗೆ ನೀರು ಬರುವುದನ್ನು ಬಂದ್ ಮಾಡಿಸಲಾಗಿದೆ. ಈ ಕುರಿತು ಇನ್ನುಷ್ಟು ಹೆಚ್ಚಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮಗನ ಮೃತದೇಹ ಪತ್ತೆಯಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ. ತಮ್ಮ ನೆರವಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಅಳಲು ತೋಡಿಕೊಳ್ಳುತ್ತಿದ್ದು, ಬಾಲಕನ ಪತ್ತೆಗೆ ಹೆಚ್ಚಿನ ರೀತಿಯಲ್ಲಿ ಕಾರ್ಯಚಾರಣೆ ನಡೆಸಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.