ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಬೆಂಗಳೂರು: ನಾಡೋಜ ಡಾ.ಸಿದ್ಧಲಿಂಗಯ್ಯನವರ ಹೆಸರಿನಲ್ಲಿ ಸಾಹಿತ್ಯ ಪ್ರಶಸ್ತಿಯನ್ನು ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪ್ರಶಸ್ತಿಯು 5 ಲಕ್ಷ ರೂಪಾಯಿ, ಪ್ರಶಸ್ತಿ ಫಲಕ, ಸ್ಮರಣಿಕೆ, ಶಾಲು, ಹಾರ ಹಾಗೂ ಫಲತಾಂಬೂಲವನ್ನು ಹೊಂದಿದೆ.
ಒಂದು ವರ್ಷ ಕನ್ನಡದ ಲೇಖಕರಿಗೆ, ಒಂದು ವರ್ಷ ಅನ್ಯ ಭಾಷೆಯ ಲೇಖಕರಿಗೆ ಪ್ರಶಸ್ತಿ ನೀಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ವಾರ್ಷಿಕ ಪ್ರಶಸ್ತಿಗಳ ನಿಯಮಾವಳಿಗಳು ಇದಕ್ಕೂ ಸಂಬಂಧಿಸಿರುತ್ತೆ. ತಳಸಮುದಾಯದ ದನಿಯಾಗಿ, ಸಾಮಾಜಿಕ ನ್ಯಾಯದ ಆಶಯಗಳಿಗೆ ಶ್ರಮಿಸುತ್ತಿರುವ ಸೃಜನಶೀಲ ಲೇಖಕರು ಕನಿಷ್ಠ 10-15 ವರ್ಷ ಸೇವೆ ಸಲ್ಲಿಸುತ್ತಿರುವವರಿಗೆ ಸಿದ್ಧಲಿಂಗಯ್ಯ ಪ್ರಶಸ್ತಿ ನೀಡಲಾಗುವುದು.
ಒಬ್ಬರು ಕವಿ ಅಥವ ಲೇಖಕ, ಒಬ್ಬ ತಳಸಮುದಾಯ ಹಾಗೂ ಶೋಷಿತ ಸಮುದಾಯಗಳಿಗೆ ಕೆಲಸ ಮಾಡುತ್ತಿರುವ ಸಾಧಕರು, ಒಬ್ಬ ಪ್ರಾಧ್ಯಾಪಕರು, ಒಬ್ಬರು ಮಹಿಳಾ ಸದಸ್ಯರು ಸೇರಿ ನಾಲ್ವರು ಆಯ್ಕೆಯ ಉಪ ಸಮಿತಿಯಲ್ಲಿರುತ್ತಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷರು ಪದನಿಮಿತ್ತ ಸದಸ್ಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.