ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕದ 2023ರ ವಿಧಾನಸಭೆ ಚುನಾವಣೆ ಸಂಬಂಧ ಈಗಾಗ್ಲೇ ಎಲ್ಲೆಡೆ ತಯಾರಿ ನಡೆದಿವೆ. ಕರ್ನಾಟಕದಲ್ಲಿ ಸ್ವತಂತ್ರವಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಯಡಿಯೂರಪ್ಪ ಪ್ರವಾಸ ಮಾಡುವುದಾಗಿ ಹೇಳುತ್ತಲೇ ಇದ್ದಾರೆ. ಆದರೆ, ಅದಕ್ಕೆ ಹೈಕಮಾಂಡ್ ಬ್ರೇಕ್ ಹಾಕುತ್ತಲೇ ಇದೆ.
ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ಮೂರು ತಂಡಗಳನ್ನು ಮಾಡಿ, ರಾಜ್ಯದ 224 ಮತಕ್ಷೇತ್ರಗಳ ಪ್ರವಾಸ ಮಾಡುವ ಮೂಲಕ ಚುನಾವಣೆಯಲ್ಲಿ ಗೆಲುವಿಗೆ ಶ್ರಮಿಸಲು ಮುಂದಾಗಿದ್ದರು. ಮುಖ್ಯಮಂತ್ರಿ ಸ್ಥಾನವನ್ನು ವಾಪಸ್ ಪಡೆದ ಹೈಕಮಾಂಡ್ ಪದೆಪದೆ ಬಿಎಸ್ವೈ ಅವರ ಓಟಕ್ಕೆ ತಡೆ ಒಡ್ಡುತ್ತಿದೆ.
ಬಿಎಸ್ವೈ, ಅವರ ಕುಟುಂಬಸ್ಥರ ವಿರುದ್ಧದ ಭ್ರಷ್ಟಾಚಾರದ ಪ್ರಕರಣದ ತನಿಖೆಗೆ ಹೈಕೋರ್ಟ್ ಅಸ್ತು ಎಂದಿರುವುದಕ್ಕೆ, ಈಗ ಅವರ ಪ್ರವಾಸಕ್ಕೆ ಕತ್ತರಿ ಹಾಕಿದೆಯಂತೆ. ಅವರು ಒಂಟಿಯಾಗಿ ಎಲ್ಲಿಯೂ ಪ್ರವಾಸ ಕೈಗೊಳ್ಳದಿರುವುದಕ್ಕೆ ಹೇಳಲಾಗಿದೆಯಂತೆ. ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ಕಟೀಲ ಅವರ ಪ್ರವಾಸಕ್ಕೆ ಯಾವುದೇ ಅಡ್ಡಿ ಇಲ್ಲ. ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪಗೆ ಸ್ಥಾನ ಕೊಟ್ಟರೂ ಅವರನ್ನು ಕಂಟ್ರೋಲ್ ಮಾಡಲು ನೋಡುತ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.