ಪ್ರಜಾಸ್ತ್ರ ಸುದ್ದಿ
ವಿಜಯಪುರ: ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ಹಗರಣ ನಡೆದಿದೆ ಎಂದು ತಮ್ಮದೆ ಹಿಂದಿನ ಸರ್ಕಾರದ ಬಗ್ಗೆ ಗಂಭೀರ ಆರೋಪ ಮಾಡಿರುವ ಶಾಸಕ ಯತ್ನಾಳ, ಈ ಬಗ್ಗೆ ಹೈಕಮಾಂಡ್ ಗೆ ಹೇಳಿದ್ದೇನೆ ಎಂದಿದ್ದಾರೆ.
ದೆಹಲಿ ನಾಯಕರ ಭೇಟಿಯಾಗಿ ಬಂದ ಬಳಿಕ ಮಾತನಾಡಿದ ಅವರು, ದೆಹಲಿ ಭೇಟಿ ಯಶಸ್ವಿಯಾಗಿದೆ. ಕರ್ನಾಟಕದಲ್ಲಿ ಹೊಂದಾಣಿಕೆ ಹಾಗೂ ಕೆಟ್ಟ ರಾಜಕಾರಣದ ಬಗ್ಗೆ ಹೇಳಿದ್ದೇನೆ. ಯಡಿಯೂರಪ್ಪ ಅವಧಿಯಲ್ಲಿನ ಕೋವಿಡ್ ಹಗರಣದ ಬಗ್ಗೆಯೂ ಹೇಳಿದ್ದೇನೆ. ಎಲ್ಲಿಯೂ ನನ್ನ ಮೇಲೆ ಕ್ರಮದ ಬಗ್ಗೆ ಹೇಳಿಲ್ಲ ಎಂದರು.
ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಧಾಮೋಹನ್ ಅಗರ್ವಾಲ್, ಅರುಣ್ ಸಿಂಗ್ ಭೇಟಿಯಾಗಿ ರಾಜ್ಯದ ವಾಸ್ತವ ಚಿತ್ರಣ ಇಟ್ಟಿದ್ದೇನೆ. ರಾಜ್ಯದಲ್ಲಿ ನನ್ನನ್ನು ಯಾರೂ ವಾಪಸ್ ಬಿಜೆಪಿಗೆ ಕರೆದುಕೊಂಡಿಲ್ಲ. ಯಡಿಯೂರಪ್ಪ, ಸದಾನಂದಗೌಡ ಉಪಕಾರವಿಲ್ಲ. ಸ್ವತಃ ಅಮಿತ್ ಶಾ ಫೋನ್ ಮಾಡಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಇನ್ನು ವಿಜಯೇಂದ್ರ ವಿಜಯಪುರಕ್ಕೆ ಭೇಟಿ ಕೊಟ್ಟಾಗ ಹಿಂದು ಹುಲಿ ಕೋಟೆಗೆ ರಾಜಾಹುಲಿ ಪುತ್ರ ಲಗ್ಗೆ, ಗುಹೆ ಸೇರಿಕೊಂಡ ಹಿಂದು ಹುಲಿ ಯತ್ನಾಳ, ನಾಪತ್ತೆಯಾಗದ ಹಿಂದು ಹುಲಿ ಎಂದು ಅತೀ ರಂಜಿತವಾಗಿ ಬಿಂಬಿಸಿರುವುದು ಸರಿಯಿಲ್ಲ. ಯಾವ ರಾಜಾಹುಲಿ, ಮರಿಹುಲಿಗೂ ಅಂಜಿ ಗುಹೆ ಸೇರುವ ಮಗಾ ನಾನಲ್ಲ ಎಂದು ಕೆಲ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದರು.