ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಮುಂಬರುವ 2023ರ ವಿಧಾನಸಭಾ ಚುನಾವಣೆ ಸಂಬಂಧ ಭರ್ಜರಿ ತಯಾರಿ ನಡೆದಿದೆ. ಎಲ್ಲ ರಾಜಕೀಯ ಪಕ್ಷಗಳು ಸಮಾವೇಶಗಳನ್ನು ನಡೆಸುತ್ತಿವೆ. ಇನ್ನು ಮಂಡ್ಯ ಹಾಗೂ ಮೈಸೂರು ಭಾಗದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ ಅನ್ನೋದು ಮರೆತು ಮಾತನಾಡುತ್ತಿದ್ದಾರೆ.
ಮೈಸೂರಲ್ಲಿ ಟಿಪ್ಪು ಹಾಗೂ ಒಡೆಯರ ನಡುವಿನ ಚುನಾವಣೆ, ಮಂಡ್ಯದಲ್ಲಿ ಮೂಡಲ ಆಂಜನೇಯಸ್ವಾಮಿ ಹಾಗೂ ಮುಲ್ಲಾಸಾಬಿ ನಡುವಿನ ಚುನಾವಣೆ ಎನ್ನುವ ಮೂಲಕ ಕೋಮುಸಂಘರ್ಷ ಸೃಷ್ಟಿಸುವ ಕೆಲಸಕ್ಕೆ ಮತ್ತೆ ಕೈ ಹಾಕಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಟಿಪ್ಪು ಕೊಂದವರು ಒಕ್ಕಲಿಗ ಸಮುದಾಯದವರು ಎಂದು ಇಬ್ಬರ ಹೆಸರನ್ನು ಹೇಳುವ ಮೂಲಕ ಎರಡು ಸಮುದಾಯಗಳ ನಡುವೆ ಒಡಕು ಮೂಡಿಸುವ ಪ್ರಯತ್ನ ನಡೆದಿದೆ. ರಾಜಮನೆತನದ ಆಳ್ವಿಕೆ ಸಂದರ್ಭದಲ್ಲಿ ನಡೆದ ಯುದ್ಧದ ವೇಳೆ ಜಾತಿ, ಧರ್ಮ, ಪಂಗಡ ಅನ್ನದೆ ಸಾಮ್ರಾಜ್ಯ ವಿಸ್ತರಣೆಗಾಗಿ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತು. ಭಾರತವನ್ನು ಬ್ರಿಟಿಷರು ಆಳುವ ಸಂದರ್ಭದಲ್ಲಿ ಅನೇಕ ಭಾರತೀಯರು ಅವರ ಕೆಲಸದವರಾಗಿ ಭಾರತೀಯರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಶಿಕ್ಷೆ ಕೊಟ್ಟಿದ್ದಾರೆ. ಸಾಯಿಸಿದ್ದಾರೆ. ಹಾಗಂತ ಇಂದು ನಾವು ಯಾರ ವಿರುದ್ಧ ಹೋರಾಟ ಮಾಡಬೇಕು ಎಂದು ಮೈಸೂರು, ಮಂಡ್ಯ ಭಾಗದ ಜನರು ಪ್ರಶ್ನಿಸುತ್ತಿದ್ದಾರೆ.
ಜಾತಿ, ಧರ್ಮದ ಮೇಲೆ ದ್ವೇಷ ಭಾಷಣ ಮಾಡಬಾರದು ಎಂದು ನಮ್ಮ ಕಾನೂನು ಹೇಳುತ್ತೆ. ಆದರೆ, ಸಿ.ಟಿ ರವಿ ಅವರು ಓರ್ವ ಮಾಜಿ ಸಚಿವರಾಗಿ, ಶಾಸಕರಾಗಿಯೂ ಎರಡು ಸಮುದಾಯಗಳ ನಡುವೆ ಒಡಕು ಸೃಷ್ಟಿಸುವ ಮೂಲಕ ರಾಜ್ಯದಲ್ಲಿ ಮತ್ತೊಂದು ರೀತಿಯ ಅಶಾಂತಿಗೆ ಕಾರಣವಾಗುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿ ಕಾರುತ್ತಿದ್ದು, ಪೊಲೀಸ್ ಇಲಾಖೆ ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.