ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ಎದುರಿಸುವ ನಾಯಕನ ಕೊರತೆಯನ್ನು ಬಿಜೆಪಿ ಎದುರಿಸುತ್ತಿದೆ. ವಿಧಾನಸಭಾ ಚುನಾವಣೆ ಮುಗಿದು 5 ತಿಂಗಳು ಮೇಲಾಗಿದೆ. ಬಿಜೆಪಿ ಹೈಕಮಾಂಡ್ ಗೆ ವಿಪಕ್ಷ ನಾಯಕ, ರಾಜ್ಯಾಧ್ಯಕ್ಷರ ನೇಮಕ ಮಾಡಲು ಆಗಿಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರ ಮಾತಿಗೆ ಉತ್ತರಿಸುವವರು ಇಲ್ಲವಾಗಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಬಿಗ್ ಶಾಕ್ ಕೊಟ್ಟಿದೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದ ಮೂಲೆ ಮೂಲೆ ಸುತ್ತಿದ ಮೋದಿ, ಅಮಿತ್ ಶಾ ಮೋಡಿಗೆ ರಾಜ್ಯದ ಜನತೆಗೆ ಒಳಗಾಗದೆ ಕೈ ಕೊಟ್ಟರು. ಇದರ ಸಿಟ್ಟೋ, ಹತಾಷೆಯೋ, ಅಸಮಾಧಾನವೋ ಗೊತ್ತಿಲ್ಲ. ಇದುವರೆಗೂ ವಿಪಕ್ಷ ನಾಯಕ, ಪಕ್ಷಕ್ಕೆ ನೂತನ ರಾಜ್ಯಾಧ್ಯಕ್ಷರ ನೇಮಕ ಮಾಡಲು ಆಗಿಲ್ಲ. ಪಂಚ ರಾಜ್ಯ ಚುನಾವಣೆ ಬೇರೆ ಸಮೀಪಿಸುತ್ತಿವೆ. ಈ ಹೊತ್ತಿನಲ್ಲಿ ಕರ್ನಾಟಕದ ರಾಜಕೀಯ ಸ್ಥಿತಿ ಖಂಡಿತ ಪರಿಣಾಮ ಬೀರಲಿದೆ.
ಮಾಜಿ ಸಿಎಂ ಯಡಿಯೂರಪ್ಪ ವಯಸ್ಸಿನ ಕಾರಣಕ್ಕೆ ಪಕ್ಷ ಸಂಘಟನೆ ಮಾಡುವುದು ಕಷ್ಟಸಾಧ್ಯ. ಇನ್ನೋರ್ವ ಮಾಜಿ ಸಿಎಂ ಬೊಮ್ಮಾಯಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಅವರು ಓಡಾಟ ಮಾಡುವುದು ಕಷ್ಟ. ಮತ್ತೊಬ್ಬ ಮಾಜಿ ಸಿಎಂ ಡಿ.ವಿ ಸದಾನಂದಗೌಡಗೆ ಮಾಸ್ ಲೀಡರ್ ಚಾರ್ಮ್ ಇಲ್ಲ. ಇನ್ನು ಸಿ.ಟಿ ರವಿ ಸೋತು ಸಣ್ಣವಾಗಿದ್ದಾರೆ. ಯತ್ನಾಳ ವಿವಾದಾತ್ಮಕ ಹೇಳಿಕೆಗಳೇ ಪಕ್ಷಕ್ಕೆ ಮುಳ್ಳಾಗಬಹುದು ಹಾಗೂ ಬಿಎಸ್ವೈ ಕುಟುಂಬದ ವಿರೋಧ ಎದುರಿಸುತ್ತಿದ್ದಾರೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ರಾಜ್ಯ ರಾಜಕೀಯಕ್ಕೆ ಕಳಿಸಿ ಒಕ್ಕಲಿಗ ಹಾಗೂ ಮಹಿಳಾ ಮತಗಳನ್ನು ಸೆಳೆಯಲು ರಾಜ್ಯಾಧ್ಯಕ್ಷ ಸ್ಥಾನ ನೀಡಿದರೂ ಹೆಚ್ಚು ವರ್ಕೌಟ್ ಆಗುವುದು ಡೌಟು. ಆರ್.ಅಶೋಕ್, ಅಶ್ವತ್ಥನಾರಾಯಣ್ ಸಹ ವಿಪಕ್ಷ ನಾಯಕನ ರೇಸಿನಲ್ಲಿದ್ದಾರೆ. ಎಷ್ಟು ಸಮರ್ಥರು ಎನ್ನುವುದು ಹೈಕಮಾಂಡ್ ಗೆ ಗೊತ್ತು. ಮತ್ತೊಂದು ಮಾಜಿ ಶಾಸಕ ರೇಣುಕಾಚಾರ್ಯ ಸೇರಿ ಹಲವು ಬಿಜೆಪಿ ನಾಯಕರ ಅಸಮಾಧಾನ ವ್ಯಕ್ತವಾಗುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿ ಹೇಗೆ ಮೈಕೆಡವಿಕೊಂಡು ನಿಂತುಕೊಳ್ಳುತ್ತೆ ಅನ್ನೋ ಕುತೂಹಲವಿದೆ.