ಪ್ರಜಾಸ್ತ್ರ ಸುದ್ದಿ
ವಿಜಯಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷರಾದ ಡಿ.ಕೆ ಶಿವಕುಮಾರ ಅವರು ಜುಲೈ 17ರಂದು ಶನಿವಾರ ವಿಜಯಪುರದ ಹಲವು ಭಾಗಗಳಲ್ಲಿ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಸ್ತಿದ್ದಾರೆ. ವಿವಿಧ ಸಮುದಾಯಗಳ ಕುಂದುಕೊರತೆ ಕೇಳುವ ಸಂಬಂಧ ಸಂವಾದ ನಡೆಸಲು ಮುಂದಾಗಿದ್ದು, ಇದಕ್ಕೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಜನರನ್ನ ಸೇರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಕೋವಿಡ್ 3ನೇ ಅಲೆ ಆತಂಕದಲ್ಲಿ ಇಡೀ ದೇಶದ ಜನತೆ ಇದೆ. ಪ್ರಧಾನಿ ಮೋದಿ ಆದಿಯಾಗಿ ಎಲ್ಲರೂ ಆತಂಕ ವ್ಯಕ್ತಪಡಿಸ್ತಿದ್ದಾರೆ. ಜನರು ಮಾಸ್ಕ್, ಸಾಮಾಜಿಕ ಅಂತರವಿಲ್ಲದೆ ಸಾಮೂಹಿಕವಾಗಿ ಕಾಣಿಸಿಕೊಳ್ತಿರುವುದು 3ನೇ ಅಲೆಗೆ ಆಹ್ವಾನ ನೀಡಿದಂತೆ ಎಂದು ಹೇಳಲಾಗ್ತಿದೆ. ಅದು ಅಲ್ದೇ, ರಾಜ್ಯ ಸರ್ಕಾರದ ಕೋವಿಡ್ ಮಾರ್ಗಸೂಚಿ ಪ್ರಕಾರ ಜುಲೈ 19ರ ತನಕ ರಾಜಕೀಯ ಸಭೆ, ಸಮಾರಂಭಗಳನ್ನ ನಡೆಸಬಾರದು ಎಂದಿದೆ. ಹೀಗಿರುವಾಗ ಕೆಪಿಸಿಸಿ ಅಧ್ಯಕ್ಷರು ಹೇಗೆ ಈ ರೀತಿ ಜನರನ್ನ ಸೇರಿಸಿ ಸಂವಾದ ಮಾಡಲು ಮುಂದಾಗಿದ್ದಾರೆ? ಇದಕ್ಕೆ ಜಿಲ್ಲಾಡಳಿತ ಸೇರಿದಂತೆ ಸ್ಥಳೀಯ ಆಡಳಿತ ಅಧಿಕಾರಿಗಳು ಹೇಗೆ ಪರವಾನಿಗೆ ನೀಡಿದ್ರು ಅನ್ನೋ ಪ್ರಶ್ನೆ ಎದ್ದಿದೆ.
ವಿಜಯಪುರ, ದೇವರಹಿಪ್ಪರಗಿ, ಸಿಂದಗಿ ಸೇರಿದಂತೆ ವಿವಿಧ ಕಡೆ ಡಿ.ಕೆ ಶಿವಕುಮಾರ ಅವರು, ಸಂವಾದ ನಡೆಸುವ ವೇಳಾಪಟ್ಟಿ ಸಿದ್ಧವಾಗಿದೆ. ಆಯಾ ಭಾಗದ ಕಾಂಗ್ರೆಸ್ ಶಾಸಕರು, ನಾಯಕರು ಇದರ ಜವಾಬ್ದಾರಿ ವಹಿಸಿಕೊಂಡಿದ್ದು, ಜನರನ್ನ ಸೇರಿಸುವ ಕೆಲಸ ಮಾಡ್ತಿದ್ದಾರೆ. ಕೋವಿಡ್ 19 ನಿರ್ವಹಣೆ ಸರ್ಕಾರ ಸರಿಯಾಗಿ ಮಾಡುತ್ತಿಲ್ಲವೆಂದು ವಾಗ್ದಾಳಿ ನಡೆಸುವ ಕಾಂಗ್ರೆಸ್ ನಾಯಕರು, ಸ್ವತಃ ತಾವೇ ಜನರನ್ನ ಸೇರಿಸಿ ಸಂವಾದ ನಡೆಸುವುದು ಎಷ್ಟರ ಮಟ್ಟಿಗೆ ಸರಿ? 3ನೇ ಅಲೆ ಶುರುವಾದ್ರೆ ಅದರಲ್ಲಿ ಕಾಂಗ್ರೆಸ್ ಹೊಣೆ ಹೊತ್ತುಕೊಳ್ಳುತ್ತಾ ಎಂದು ಸಾರ್ವಜನಿಕರು ಪ್ರಶ್ನಿಸ್ತಿದ್ದಾರೆ.