ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಉತ್ತರ ಕರ್ನಾಟಕದ ಕಥೆ ಹಾಗೂ ಪ್ರತಿಭೆ ಇರುವ ಹೀರೋ ನಟಿಸಿರುವ ಕ್ಷೇತ್ರಪತಿ ಚಿತ್ರ ಶುಕ್ರವಾರ ರಿಲೀಸ್ ಆಗಿದ್ದು, ಎಲ್ಲರಿಂದ ಮೆಚ್ಚುಗೆ ಗಳಿಸುತ್ತಿದೆ. ಶ್ರೀಕಾಂತ್ ಕಟಗಿ ಮೊದಲ ಪ್ರಯತ್ನದಲ್ಲಿಯೇ ಯಶಸ್ವಿ ಚಿತ್ರ ನೀಡಿದ್ದಾರೆ. ನಟ ನವೀನ್ ಶಂಕರ್ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಬಸವನ ಪಾತ್ರಕ್ಕೆ ನವೀನ್ ಶಂಕರ್ ಪರಕಾಯ ಪ್ರವೇಶ ಮಾಡಿ, ಉತ್ತರ ಕರ್ನಾಟಕ ಭಾಗದ ರೈತರ ಗೋಳು ಏನಿದೆ? ಕಾರ್ಪೂರೇಟ್ ಜಗತ್ತು ರೈತರನ್ನು ಹೇಗೆ ಆಳುತ್ತಿದೆ ಅನ್ನೋದನ್ನು ಹೇಳಿದ್ದಾರೆ. ಗುಲ್ಟು ಚಿತ್ರದ ಬಳಿಕ ಕ್ಷೇತ್ರಪತಿಯಾಗಿ ಬಂದ ನವೀನ್ ಶಂಕರ್, ಅದ್ಭುತವಾಗಿ ನಟಿಸಿದ್ದಾರೆ.
ರೈತರ ಆತ್ಮಹತ್ಯೆ, ಸಿಗದ ಬೆಲೆ, ಎಪಿಎಂಸಿಗೆ ಸೆಡ್ಡು ಹೊಡೆಯುವುದನ್ನು ಅಚ್ಚುಕಟ್ಟಾಗಿ ತೋರಿಸಲಾಗಿದೆ. ಬೆಂಗಳೂರಿನಲ್ಲಿ ಇಂಜಿನಿಯರ್ ಓದುವ ವಿದ್ಯಾರ್ಥಿ ಬಸವ ತಂದೆಯ ಆತ್ಮಹತ್ಯೆಯ ಬಳಿಕ ಊರಿಗೆ ಬಂದು ಕೃಷಿಯಲ್ಲಿ ಸಾಧಿಸುವ ತೋರಿಸುವಾಗ ನಡೆಯುವ ಘಟನೆಯ ಕಥಾಹಂದರವೇ ಈ ಕ್ಷೇತ್ರಪತಿ.
ಹೊಂದಿಸಿ ಬರೆಯಿರಿ ಚಿತ್ರದ ಬಳಿಕ ನಟಿ ಅರ್ಚನಾ ಜೋಯಿಸ್, ನವೀನ್ ಶಂಕರ್ ಗೆ ಇಲ್ಲಿ ಮತ್ತೊಮ್ಮೆ ಜೋಡಿಯಾಗಿದ್ದಾರೆ. ಇಲ್ಲಿ ಟಿವಿ ನಿರೂಪಕಿಯಾಗಿ, ಅಚ್ಯುತ್ ಕುಮಾರ್ ಪತ್ರಿಕೆಯ ಎಡಿಟರ್ ಆಗಿ, ರಾಹುಲ್ ಐನಾಪೂರ ವಿಲನ್ ಆಗಿ ಮಿಂಚಿದ್ದಾರೆ. ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳು ಮಾಡಿದ ಚಿತ್ರಕ್ಕೆ ಸಿನಿ ರಸಿಕರು ಜೈ ಎನ್ನುತ್ತಿದ್ದಾರೆ.