ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ ಮಲಘಾಣ ರಸ್ತೆಯಲ್ಲಿನ ಸ್ಮಶಾನಕ್ಕೆ ಹೋಗುವ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ಕಳೆದ ಹಲವು ದಿನಗಳ ಹಿಂದೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗಿದೆ. ಈ ಸಂಬಂಧ ಇಂಡಿಯ ಉಪ ವಿಭಾಗೀಯ ಅಧಿಕಾರಿ ರಾಹುಲ್ ಶಿಂಧೆ ಸೋಮವಾರ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಜಾಗ ಒತ್ತುವರಿಗೆ ಸಂಬಂಧಿಸಿದಂತೆ ಸ್ಥಳೀಯರಿಂದ ಮನವಿ ಬಂದ ಹಿನ್ನೆಲೆಯಲ್ಲಿ ಸರ್ವೇ ನಂಬರ್ ಸೇರಿದಂತೆ ಸ್ಥಳ ಪರಿಶೀಲನೆ ನಡೆಸಿದರು. ಜಾಗ ಹೇಗೆ ಖರೀದಿ ಮಾಡಲಾಗಿದೆ, ಯಾರಿಂದ ಖರೀದಿ ಮಾಡಲಾಗಿದೆ, ಖಾತೆಯನ್ನು ಯಾರು ಕೊಟ್ಟಿದ್ದಾರೆ ಅನ್ನೋದರ ದಾಖಲಾತಿಯನ್ನು ಕಂದಾಯ ಅಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳು ಸಂಗ್ರಹಿಸಿ ಸಲ್ಲಿಸುವಂತೆ ಎಸಿ ರಾಹುಲ್ ಶಿಂಧೆ ಸೂಚಿಸಿದರು.
ಈ ವೇಳೆ ತಹಶೀಲ್ದಾರ್ ಸಂಜೀವಕುಮಾರ್ ದಾಸರ, ಕಂದಾಯ ನಿರೀಕ್ಷಕ ಐ.ಎ ಮಕಾಂದರ್, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ್, ಗ್ರಾಮ ಲೆಕ್ಕಾಧಿಕಾರಿ ರಾಮಪ್ಪ ರಾಂಪೂರ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.