ಮಂಡ್ಯ: ಜಿಂದಾಲ್ಗೆ ಕೊಡುತ್ತಿರುವ ಭೂಮಿಯಲ್ಲಿ ನನಗೂ 50 ಎಕರೆ ನೀಡಿ ಎಂದು ವ್ಯಕ್ತಿಯೊಬ್ಬ ಸರ್ಕಾರಕ್ಕೆ ಪತ್ರ ಬರೆದಿದ್ದಾನೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ರಾಜೇಗೌಡನದೊಡ್ಡಿ ಗ್ರಾಮದ ಆರ್.ಬಿ ಬಸವೇಗೌಡ ಎಂಬಾತ ಪತ್ರ ಬರೆದಿದ್ದಾನೆ.
ಜಿಂದಾಲ್ ಕಂಪನಿಗೆ ನೀಡುತ್ತಿರುವ ಭೂಮಿಯಲ್ಲಿ ನನಗೆ 50 ಎಕರೆ ನೀಡಿ. ಅಲ್ಲಿ ಕೋಳಿಫಾರಂ ಹಾಗೂ ಇಟ್ಟಿಗೆ ಫ್ಯಾಕ್ಟರಿ ನಿರ್ಮಿಸಿ ನೂರು ಮಂದಿಗೆ ಕೆಲಸ ನೀಡುತ್ತೇನೆ ಅಂತಾ ಬಸವೇಗೌಡ ಎಂಬಾತ, ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾನೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾನೆ.
ಒಂದೇ ಕಡೆ 50 ಎಕರೆ ಭೂಮಿ ಹುಡುಕುತ್ತಿದ್ದೇನೆ. ಆದರೆ, ಎಲ್ಲೂ ಒಂದೇ ಕಡೆ ಭೂಮಿ ಸಿಗುತ್ತಿಲ್ಲ. ಎಕರೆಗೆ 15 ರಿಂದ 20 ಲಕ್ಷ ಬೆಲೆ ಹೇಳುತ್ತಿದ್ದಾರೆ. ಹೀಗಾಗಿ ಖಾಸಗಿ ವ್ಯಕ್ತಿಗಳಿಂದ ಭೂಮಿ ಖರೀದಿಸಲು ಹೆಚ್ಚು ಹಣ ಬೇಕಾಗುತ್ತದೆ. ಎಕರೆಗೆ 5 ಲಕ್ಷದಂತೆ ಹಣ ನೀಡುತ್ತೇನೆ. ನೂರು ಜನರಿಗೆ ಉದ್ಯೋಗ ನೀಡುತ್ತೇನೆ. ಹೀಗಾಗಿ ಜಿಂದಾಲ್ ಕಂಪನಿಗೆ ಭೂಮಿ ನೀಡುತ್ತಿರುವ ಜಾಗದಲ್ಲಿ ನನಗೂ 50 ಎಕರೆ ಭೂಮಿ ನೀಡಿ ಎಂದು ಮನವಿ ಮಾಡಿದ್ದಾನೆ.