ಪ್ರಜಾಸ್ತ್ರ ಸುದ್ದಿ
ಸಿಂದಗಿ: ಕರ್ನಾಟಕ ಜನನ ಮತ್ತು ಮರಣ ನೋಂದಣಿ ತಿದ್ದುಪಡಿ ಕಾಯ್ದೆ 2022ಅನ್ನು ರದ್ದುಗೊಳಿಸುವಂತೆ ಆಗ್ರಹಿಸಿ, ಸಿಂದಗಿ ತಾಲೂಕು ವಕೀಲರ ಸಂಘದ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಹಿರಿಯ ವಕೀಲರಾದ ಎಂ.ಕೆ ಪತ್ತಾರ, ಜನಪರ ಸರ್ಕಾರ ಎಂದು ಹೇಳುವವರೆ ಜನರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಈ ತಿದ್ದುಪಡಿಯಿಂದ ತಾಲೂಕಿನ ಜನರ ದುಡ್ಡು, ಸಮಯ ವ್ಯರ್ಥವಾಗುತ್ತದೆ. ಪ್ರತಿ ಬಾರಿ ಇಂಡಿಗೆ ಹೋಗಬೇಕು ಅಂದರೆ ಹೇಗೆ ಸಾಧ್ಯ. ಕೂಡಲೇ ಇದನ್ನು ರದ್ದುಗೊಳಿಸಬೇಕು ಎಂದರು.
ಹಿರಿಯ ವಕೀಲ ಬಿ.ಎಚ್ ಚನಗೊಂಡ ಮಾತನಾಡಿ, ಜನನ, ಮರಣ ಪತ್ರ ಇದು ತುಂಬಾ ಅವಶ್ಯಕವಾಗಿದೆ. ಕೋರ್ಟ್ ಮೂಲಕ ಮಾಡಿಸಿಕೊಳ್ಳುವುದರಿಂದ ಆಯಾ ತಾಲೂಕಿನ ಜನರಿಗೆ ಅನುಕೂಲ ಹಾಗೂ ತ್ವರಿತವಾಗಿ ಆಗುತ್ತೆ. ಕಂದಾಯ ಇಲಾಖೆಯ ಮೂಲಕ ಅಂದರೆ ಜನರಿಗೆ ತೊಂದರೆ. ತಹಶೀಲ್ದಾರ್, ಎಸಿ ಅವರ ಜವಾಬ್ದಾರಿಗಳ ನಡುವೆ ಜನನ, ಮರಣ ಪತ್ರದ ಕೆಲಸ ಮಾಡುವುದು ಕಷ್ಟ. ಚುನಾವಣೆ ಸಂದರ್ಭದಲ್ಲಿ ಅಧಿಕಾರಿಗಳು ಒತ್ತಡದಲ್ಲಿರುತ್ತಾರೆ. ಆಗ ಜನರಿಗೆ ತುರ್ತಾಗಿ ಬೇಕಾದ ಜನನ ಹಾಗೂ ಮರಣ ಪ್ರಮಾಣ ಪತ್ರ ಸಿಗೋದು ಕಷ್ಟ. ಹೀಗಾಗಿ ಸರ್ಕಾರ ಇದನ್ನು ಕೂಡಲೇ ರದ್ದುಗೊಳಿಸಬೇಕು ಎಂದರು.
ನಂತರ ತಹಶ್ಲೀದಾರ್ ನಿಂಗಣ್ಣ ಬಿರಾದಾರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಬಿ ದೊಡಮನಿ, ಎಸ್.ಬಿ ಪಾಟೀಲ, ಎಂ.ಸಿ ಯಾತನೂರ, ಬಿ.ಜಿ ನೆಲೋಗಿ, ಆರ್.ಎಂ ಚೌರ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.