ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕುಂದಾನಗರಿ ಬೆಳಗಾವಿ ಜಿಲ್ಲೆಯ ಜನರಿಗೆ ಚಿರತೆ ನಿದ್ದೆಗೆಡಿಸಿದೆ. ಕಾಫಿನಾಡು ಚಿಕ್ಕಮಗಳೂರು ಜನತೆಗೆ ಹುಲಿ ನಿದ್ದೆಗೆಡಿಸಿದೆ. ಚಿರತೆ, ಹುಲಿಯ ಆಟಕ್ಕೆ ಅಕ್ಷರಶಃ ಜನರು ಕಂಗಾಲಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾನಳ್ಳಿ ಗ್ರಾಮದ ಸುಂದರೇಶ್ ಎಂಬುವರಿಗೆ ಸೇರಿದ ಜಾನುವಾರು ಹುಲಿ ದಾಳಿಗೆ ಬಲಿಯಾಗಿದೆ. ದಿನಕ್ಕೆ ಒಂದಲ್ಲ ಒಂದು ಕಡೆ ಹುಲಿ ದಾಳಿ ನಡೆಸಿ ಜಾನುವಾರುಗಳನ್ನು ಬಲಿ ಪಡೆಯುತ್ತಿದೆ. ಹೀಗಾಗಿ ಜನರು ಓಡಾಡಲು ಭಯ ಪಡುತ್ತಿದ್ದು, ಹುಲಿಯನ್ನು ಹಿಡಿಯಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇತ್ತ ಬೆಳಗಾವಿಯಲ್ಲಿ ಕಳೆದ 23 ದಿನಗಳಿಂದ ಚಿರತೆ ಚೆಳ್ಳೆಹಣ್ಣು ತಿನ್ನಿಸುತ್ತಿದೆ. ಚಿರತೆ ಬಲೆಗೆ ಕೆಡವಲು ಶಿಖಾರಿ ನಾಯಿ, ಹಂದಿ ಬಲಿ, ಗಜಪಡೆ, ಡ್ರೋನ್ ಕ್ಯಾಮೆರಾ ಬಳಸಲಾಗಿದೆ. ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ಚಿರತೆ ಸೆರೆಗೆ ಸತತ ಪ್ರಯತ್ನ ನಡೆಸಿದ್ದಾರೆ. ಆದರೆ, ಚಿರತೆ ಮಾತ್ರ ಭಾರೀ ಚಳ್ಳೆಹಣ್ಣು ತಿನ್ನಿಸುತ್ತಿದೆ.