ಪ್ರಜಾಸ್ತ್ರ ಸುದ್ದಿ
ಮೈಸೂರು: ಇವತ್ತಿನ ಅವಸರದ ಬದುಕಿನಲ್ಲಿ ಪುಸ್ತಕ ಓದು ಕಡಿಮೆಯಾಗುತ್ತಿದೆ. ಎಲ್ಲವೂ ಮೊಬೈಲ್ ಮೂಲಕವೇ ನಡೆಯುತ್ತಿದೆ. ಹೀಗಾಗಿ ಗ್ರಂಥಾಲಯಕ್ಕೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದರ ನಡುವೆಯೂ ಅನೇಕರು ಓದುವ, ಓದಿಸುವ ಕಾಯಕ ಮಾಡುತ್ತಿದ್ದು, ಅಂತವರ ಸಾಲಿನಲ್ಲಿ ಇಲ್ಲಿನ ವಿವಿ ಪುರಂ ಪೊಲೀಸ್ ಠಾಣೆ ಪಿಎಸ್ಐ ಒಬ್ಬರು.
ಪಿಎಸ್ಐ ಆರ್.ವೆಂಕಟೇಶ್ ಪುಸ್ತಕ ಪ್ರೇಮವನ್ನು ಬೆಳೆಸಿಕೊಂಡವರು. ತಮ್ಮ ಕರ್ತವ್ಯದ ನಡುವೆಯೂ ಓದುತ್ತಲೇ ಇರುತ್ತಾರೆ. ಅದನ್ನು ಇತರರಲ್ಲಿ ಬೆಳೆಸುವ ಉದ್ದೇಶದಿಂದ ಠಾಣೆಯಲ್ಲಿಯೇ ಚಿಕ್ಕದಾದ ಗ್ರಂಥಾಲಯ ಶುರು ಮಾಡಿದ್ದಾರೆ. ಠಾಣೆಗೆ ಬರುವ ಸಾರ್ವಜನಿಕರು ಕಾಯುತ್ತಾ ನಿಂತುಕೊಳ್ಳುವ ಬದಲು ಒಂದಿಷ್ಟು ಓದಿಕೊಂಡು ಇರಲಿ ಅನ್ನೋ ಕಾರಣಕ್ಕೆ ಇಂತಹ ಒಳ್ಳೆಯ ಕೆಲಸ ಮಾಡಿದ್ದು, 300ಕ್ಕೂ ಹೆಚ್ಚು ಪುಸ್ತಕಗಳು ಇಲ್ಲಿವೆ. ಈ ಹಿಂದೆ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲೂ ಇಂತಹದ್ದೇ ಕೆಲಸ ಮಾಡಿ ಮೆಚ್ಚುಗೆ ಗಳಿಸಿದ್ದಾರೆ.
ಸಾರ್ವಜನಿಕರು ಅಲ್ಲದೆ ಪೊಲೀಸ್ ಸಿಬ್ಬಂದಿ ಸಹ ತಮ್ಮ ಕೆಲಸ ಮುಗಿದ ಮೇಲೆ ಓದಬಹುದು. ಈ ಮೂಲಕ ಸಮಾಜದಲ್ಲಿ ಒಂದಿಷ್ಟು ಸುಧಾರಣೆ ತರುವ ಕೆಲಸವನ್ನು ಪಿಎಸ್ಐ ಆರ್.ವೆಂಕಟೇಶ್ ಮಾಡುತ್ತಿದ್ದಾರೆ. ಇವರ ಕೆಲಸಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಖುಷಿಯನ್ನು ಹಂಚಿಕೊಂಡಿದ್ದಾರೆ. ಜನತೆಯಿಂದಲೂ ಬೆಂಬಲ ವ್ಯಕ್ತವಾಗಿದೆ. ಇವರ ಕಾರ್ಯಕ್ಕೆ ‘ಪ್ರಜಾಸ್ತ್ರ ವೆಬ್ ಪತ್ರಿಕೆ’ ತಂಡದ ವತಿಯಿಂದಲೂ ಅಭಿನಂದನೆಗಳು.